ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕನನ್ನು ಅಪಹರಿಸಿ, ಮನಬಂದಂತೆ ಥಳಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ಬಂಧನವಾಗಿರುವ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಮತ್ತು ಅವರ ಸಹಚರರನ್ನು ಜೂನ್ 15 ರಂದು ಕೋರ್ಟ್ ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ವಿಚಾರಣೆ ಮುಂದುವರಿದಿದೆ. ಇದರ ನಡುವೆ ದರ್ಶನ್ ಬಗ್ಗೆ ಒಂದೊಂದೆ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಮೈಸೂರಿನ ಬಳಿಯಿರುವ ದರ್ಶನ್ ಅವರ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ಎತ್ತಿನ ಕೊಂಬು ಚುಚ್ಚಿ ಗಾಯವಾದಾಗ ದರ್ಶನ್ ಸಹಾಯ ಮಾಡಲಿಲ್ಲ ಎಂಬ ಆರೋಪ ಮೊನ್ನೆಯಷ್ಟೇ ಕೇಳಿಬಂತು. ಅಲ್ಲದೆ, ಸಹಾಯ ಕೇಳಲು ಹೋದಾಗ ನಾಯಿ ಛೂ ಬಿಟ್ಟಿದ್ದರು ಎಂದು ಸಂತ್ರಸ್ತನ ಸಂಬಂಧಿಕರು ಮಾಧ್ಯಮದ ಮುಂದೆ ಬಾಯ್ಬಿಟ್ಟಿದ್ದರು. ಪೊನ್ನಂಪೇಟೆಯಲ್ಲಿರುವ ದರ್ಶನ್ ಅವರ ಪೂರ್ವಿಕರ ನಿವಾಸವನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿ ಒಂದೊಂದೆ ಆರೋಪಗಳು ದರ್ಶನ್ ವಿರುದ್ಧ ಕೇಳಿಬರುತ್ತಿವೆ. ಇದೀಗ ಹಿರಿಯ ಪತ್ರಕರ್ತ ದಿವಂಗತ ರವಿ ಬೆಳಗೆರೆ ಅವರ ಪುತ್ರಿ ಭಾವನಾ ಬೆಳಗೆರೆ, ನಟ ದರ್ಶನ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯವಾಣಿ ಜತೆ ಮಾತನಾಡಿದ ಭಾವನಾ ಬೆಳಗೆರೆ, ನಟ ದರ್ಶನ್ ಬಗ್ಗೆ ಹೇಳುವುದಕ್ಕೂ ಆಗದ ಅಹಸ್ಯ ವರದಿಗಳಿವೆ. ಆ ವರದಿಗಳನ್ನು ವಿವರಿಸಲು ಸಹ ಆಗುವುದಿಲ್ಲ. ಅಷ್ಟೊಂದು ಕೆಟ್ಟದಾಗಿದೆ. ನಾವೀಗ ದೂರು ದಾಖಲಿಸಬೇಕಿದೆ. ಕೆಲವರು ದೂರು ನೀಡಲು ಹೋಗುತ್ತೇವೆ ಎನ್ನುತ್ತಿದ್ದಾರೆ. ಇನ್ನು ಎರಡ್ಮೂರು ದಿನದಲ್ಲಿ ದೂರು ಕೊಡಲು ಹೋಗಲಿದ್ದಾರೆ ಎಂಬ ಭರವಸೆ ಇದೆ. ಇನ್ನು ಅಸಹ್ಯಕರವಾದ ಸಂಗತಿಗಳು ಹೊರಬರಲಿವೆ ಎಂಬುದನ್ನು ನಾನು ಹೇಳುತ್ತೇನೆ ಎಂದು ಭಾವನಾ ಬೆಳಗೆರೆ ಹೇಳಿದರು.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಮಗನ ಬಗ್ಗೆ ಚಿಂತಿಸಬೇಕಿತ್ತು. ಅದೇ ರೀತಿ ಪವಿತ್ರಾ ಗೌಡ ನಾನಾದರೂ ದರ್ಶನ್ನ ಸರಿ ಮಾಡ್ತೀನಿ ಅಂತಾ ಯೋಚಿಸಬೇಕಿತ್ತು. ಅದನ್ನು ಬಿಟ್ಟು, ಇಬ್ಬರು ಪೈಪೋಟಿಗೆ ನಿಂತರು. ಪ್ರತಿ ವಿಚಾರದಲ್ಲೂ ಕಿತ್ತಾಡಿಕೊಂಡರು. ಸಾಮಾಜಿಕ ಜಾಲತಾಣದಲ್ಲೂ ಇಬ್ಬರ ನಡುವಿನ ಕಿತ್ತಾಟ ಮುಂದುವರಿಯಿತು. ಇಬ್ಬರಿಗೆ ಕೈತುಂಬ ಕೆಲಸ ಇದ್ದಿದ್ದರೆ ಇಬ್ಬರು ಈ ರೀತಿ ಕಿತ್ತಾಡಿಕೊಳ್ಳುತ್ತಿರಲಿಲ್ಲ. ದರ್ಶನ್ ಮತ್ತು ಪವಿತ್ರಾ ನಡುವಿನ ಸಂಬಂಧ ಏನೇ ಇರಲಿ, ಅವಳಾದರೂ ದರ್ಶನ್ರನ್ನು ಸರಿಮಾಡಬೇಕಿತ್ತು ಎಂದು ಭಾವನಾ ಬೆಳಗೆರೆ ಟೀಕಾ ಪ್ರಹಾರ ನಡೆಸಿದ್ದರು.
ದರ್ಶನ್ ವಿಚಾರದಲ್ಲಿ ಚಿತ್ರರಂಗದ ಎಲ್ಲರು ಪ್ರತಿಕ್ರಿಯೆ ನೀಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬರು ಕೂಡ ಈ ವಿಚಾರದ ಬಗ್ಗೆ ಧ್ವನಿ ಎತ್ತಬೇಕಿದೆ ಎಂದು ಭಾವನಾ ಆಗ್ರಹಿಸಿದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ ಎಂಬ ಭರವಸೆ ನನಗಿದೆ. ಒಳ್ಳೆಯ ತನಿಖಾ ತಂಡ ಈ ಪ್ರಕರಣವನ್ನು ಮುನ್ನಡೆಸುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಆ ಖ್ಯಾತ ನಟಿಗೆ ಮಾಡಬಾರದ್ದನ್ನು ಮಾಡಿ ದುರ್ಯೋಧನನಂತೆ ನಗುತ್ತಿದ್ದ! ದರ್ಶನ್ ವಿರುದ್ಧ ಮತ್ತೊಂದು ಆರೋಪ