ಕೋಟ: ಕಾಳಿಂಗ ನಾವಡರು ಹಾಗೂ ಧಾರೇಶ್ವರರು ಯಕ್ಷರಂಗದ ಅವಳಿ ಧ್ರುವತಾರೆಗಳು, ಅವರಲ್ಲಿನ ಪ್ರತಿಭೆ ಅಪ್ರತಿಮವಾದದ್ದು ಮತ್ತು ಯಕ್ಷಲೋಕದಲ್ಲಿ ಶಾಶ್ವತವಾದದ್ದು. ಅವರ ನೆನಪನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಯಕ್ಷಗಾನ ಹವ್ಯಾಸಿ ಕಲಾವಿದ ಗಾ.ನ.ಭಟ್ ಹೇಳಿದರು.
ಹಂಗಾರಕಟ್ಟೆಯಲ್ಲಿ ಮಹಿಷಮರ್ದಿನಿ ಕಲಾಪ್ರತಿಷ್ಠಾನ ಚಾರ ಹೆಬ್ರಿ ಆಶ್ರಯದಲ್ಲಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಹಕಾರದಲ್ಲಿ ಸೋಮವಾರ ಭಾಗವತ ದಿ.ಕಾಳಿಂಗ ನಾವಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವ್ಯಾಸಿ ಭಾಗವತ ಹರಿಹರಪುರ ಶಿವಶಂಕರ ಭಟ್ ಅವರಿಗೆ ಕಾಳಿಂಗ ನಾವಡ ಹಾಗೂ ಸುಬ್ರಹ್ಮಣ್ಯ ಧಾರೇಶ್ವರ ಸ್ಮರಣಾರ್ಥ ಗೌರವಾರ್ಪಣೆ ಸಲ್ಲಿಸಲಾಯಿತು. ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ, ಸಾಲಿಗ್ರಾಮ ಮೇಳದ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಕಲ್ಕೂರು ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರು, ಗೆಳೆಯರ ಬಳಗದ ಅಧ್ಯಕ್ಷ ತಾರಾನಾಥ ಹೊಳ್ಳ ಇದ್ದರು.
ವಿದ್ವಾನ್ ವಿನಾಯಕ ಭಟ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟಕ ಚಾರ ಪ್ರದೀಪ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಬೆಳಂಜೆ ಕಾರ್ಯಕ್ರಮ ನಿರೂಪಿಸಿದರು. ಕಲಾಕೇಂದ್ರ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ವಂದಿಸಿದರು.