ಚನ್ನಗಿರಿ: ತಾಲೂಕಿನ ಸೂಳೆಕೆರೆ ಸಮೀಪದ ಸೊಮ್ಲಾಪುರ, ಸಿದ್ದಾಪುರ ಗ್ರಾಮದ ಬಳಿಯ ಗುಡ್ಡದ ಮೇಲೆ ಬೆಸ್ಕಾಂ ಇಲಾಖೆ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಹೊರಟಿರುವುದನ್ನು ವಿರೋಧಿಸಿ, ಸೂಳೆಕೆರೆ ಸಂರಕ್ಷಣಾ ಸಮಿತಿ ಹಾಗೂ ಖಡ್ಗ ಸಂಸ್ಥೆಯ ಕಾರ್ಯಕರ್ತರು ಭಾನುವಾರ ಗುಡ್ಡದಲ್ಲಿ ಸಸಿ ನೆಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೂಳೆಕೆರೆ ಸಂರಕ್ಷಣಾ ಸಮಿತಿ ಆಧ್ಯಕ್ಷರಾದ ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಶ್ರೀಗಳು, ಮನುಕುಲ ಇಂದು ಉಸಿರಾಡುತ್ತಿರುವುದು ಗಿಡಮರಗಳಿಂದ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬೆಳೆದು ನಿಂತಿರುವ ಮರ ಕಡಿದು ಹಾಕುತ್ತಿದ್ದಾನೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ಸರ್ಕಾರ ಜನರ ಅನುಕೂಲತೆಗಾಗಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿದೆ. ಅದಕ್ಕಾಗಿ ಸೂಳೆಕೆರೆ ಪಕ್ಕದ ಗ್ರಾಮದ ಗುಡ್ಡವನ್ನು ಗುರುತಿಸಿದೆ. ಆದರೆ, ಈ ಕುರಿತು ಸ್ಥಳೀಯರ ಸಭೆ ಕರೆದು ಅಭಿಪ್ರಾಯ, ಸಾಧಕ ಬಾಧಕ ಕೇಳಿಲ್ಲ ಎಂದು ಆಕ್ಷೇಪಿಸಿದರು.
ಕೇವಲ ಬೆಸ್ಕಾಂ ಇಲಾಖೆಯ ಅರ್ಜಿ ಮುಂದಿಟ್ಟುಕೊಂಡು ಸೋಲಾರ್ ಪ್ಲಾಂಟ್ ಮಾಡುತ್ತಿರುವುದನ್ನು ನಾವು ಒಪ್ಪುವುದಿಲ್ಲ. ಈ ಸ್ಥಳದಲ್ಲಿ ಬೆಲೆ ಬಾಳುವ ಅನೇಕ ಜಾತಿಯ ಮರಗಿಡಗಳಿವೆ, ಅಳಿವಿನಂಚಿನ ಕಾಡು ಪ್ರಾಣಿಗಳಿವೆ. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳದೇ ಕಾಮಗಾರಿಗೆ ಮುಂದಾದರೆ ತಾಲೂಕಿನಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಾಂತವೀರ ಶ್ರೀಗಳು ಮಾತನಾಡಿ, ಸೋಲಾರ್ ಪ್ಲಾಂಟ್ ಅವಶ್ಯಕತೆ ನಮ್ಮ ತಾಲೂಕಿಗಿಲ್ಲ. ತಾಲೂಕಿನ ಅಭಿವೃದ್ಧಿಗೆ ಇತರೆ ನೂರಾರು ಯೋಜನೆಗಳಿವೆ. ಬೇಕಾದರೆ, ಅವುಗಳನ್ನು ಅನುಷ್ಠಾನ ಮಾಡಲಿ. ಅದನ್ನು ಬಿಟ್ಟು ಇರುವ ಒಂದಿಷ್ಟು ಕಾಡನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳುಗೆಡವಲು ಯತ್ನಿಸಬೇಡಿ ಎಂದು ತಾಕೀತು ಮಾಡಿದರು.
ಐತಿಹಾಸಿಕ ತಾಣವಾಗಿರುವ ಸೂಳೆಕೆರೆ ರಾಜ್ಯದಲ್ಲಿ 2ನೇ ದೊಡ್ಡ ಕೆರೆ. ಅದರ ಸೌಂದರ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದರು.
ಸಂರಕ್ಷಣಾ ಸಮಿತಿಯ ಮುದಿಗೆರೆ ಚಂದ್ರಹಾಸ, ಸುನೀಲ್, ಪ್ರಕಾಶ್, ಮಂಜಪ್ಪ, ಬಿ. ರವಿ, ಕುಬೇಂದ್ರಸ್ವಾಮಿ, ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ ಇದ್ದರು.
ಗುಡ್ಡ ಸೇರಿದ ಸಾವಿರ ಬೀಜದುಂಡೆ
ಈ ಸಂದರ್ಭದಲ್ಲಿ ಸೊಮ್ಲಾಪುರ, ಸಿದ್ದಾಪುರ ಗ್ರಾಮದ ಬಳಿಯ ಗುಡ್ಡದ ಮೇಲೆ ಸೂಳೆಕೆರೆ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ 1 ಸಾವಿರ ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯಿತು.