ಬಳ್ಳಾರಿ: ಗರ್ಭಿಣಿಯರು ಹಾಗೂ ಬಾಣಂತಿಯರು ಹೆಚ್ಚಾಗಿ ತರಕಾರಿ-ಸೊಪ್ಪು ಹಾಗೂ ಪೌಷ್ಟಿಕ ಭರಿತ ಆಹಾರವನ್ನೇ ಸೇವಿಸಬೇಕು. ಇದರಿಂದ ಹುಟ್ಟುವ ಮಕ್ಕಳು ಆರೋಗ್ಯ ಮತ್ತು ಪೌಷ್ಟಿಕತೆಯಿಂದ ಸದೃಢರಾಗುತ್ತಾರೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿದೇವಿ ಹೇಳಿದರು.
ನಗರದ ಜಿಪಂ ಆವರಣದ ನಜೀರ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀೀಯ ಪೋಷಣಾ ಅಭಿಯಾನ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪೌಷ್ಟಿಕ ಮಕ್ಕಳ ಆರೋಗ್ಯದ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್ಲಾ ಅಧಿಕಾರಿ ವೃಂದ ಕ್ರಮವಹಿಸಿ ಪೌಷ್ಟಿಕ ತೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಉದ್ದೇಶಗಳನ್ನು ಈ ತಿಂಗಳಾದ್ಯಂತ ಸಮುದಾಯಗಳಲ್ಲಿ ಪ್ರಚಾರ ಕೈಗೊಂಡು ಪೌಷ್ಟಿಕತೆಯ ಮಹತ್ವವನ್ನು ತಿಳಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯು ಬಾಣಂತಿ ಮತ್ತು ಗರ್ಭೀಣಿಯರ ಕ್ಷೇಮಾಭಿವೃದ್ಧಿಗಾಗಿಯೇ ಅನುಷ್ಠಾನಗೊಳಿಸಲಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಸತೀಶ್ ಜೆ.ಬಾಳಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಆರ್ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಟಿಎಚ್ಒ ಡಾ.ಮೋಹನ್ಕುಮಾರಿ, ಜಿಲ್ಲಾ ನಿರೂಪಣಾಧಿಕಾರಿ(ಪ್ರ) ಜಲಾಲಪ್ಪ .ಏ.ಕೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ್.ಪಿ, ಜಿಲ್ಲಾ ಮಕ್ಕಳ ಘಟಕ ರಕ್ಷಣಾಧಿಕಾರಿ ರಾಜಾನಾಯ್ಕ ಹಾಗೂ ಇತರರಿದ್ದರು.