ವಿಜಯವಾಣಿ ಸುದ್ದಿಜಾಲ ಧಾರವಾಡ
ಅತ್ಯುತ್ತಮ ಉದ್ಯಮಶೀಲರಾಗಲು ಸಹನೆ, ದಯೆ, ನೈತಿಕತೆ ಉಳ್ಳವರಾಗಿದ್ದರೆ ಯಶಸ್ಸು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಭೀಮಪ್ಪ ಎನ್.ಎಂ. ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ತರಬೇತಿ ಕೇಂದ್ರ ಹಾಗೂ ಯಶೋಧಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಇಲ್ಲಿನ ವಿದ್ಯಾಗಿರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತರಬೇತಿ ಶಿಬಿರದ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರದ ಸಮಾನಾಂತರವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸೇವೆ ಮಾಡುತ್ತಿರುವುದು ಶ್ಲಾನೀಯ. ಪಿಎಂಇಜಿಪಿ ಯೋಜನೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಕೆವಿಐಸಿ, ಕೆವಿಐಬಿ ಯೋಜನೆಗಳ ಮೂಲಕ ನೇರ ಸಬ್ಸಿಡಿ ಸಾಲ ಪಡೆಯುವ ವಿಧಾನ ತಿಳಿಸಿದರು. ಅಭಿವೃದ್ಧೀಶಿಲತೆಯ ತತ್ವದ ಮೂಲಕ ಯಶಸ್ಸು ಪಡೆದ ಹಲವು ಜೀವಂತ ನಿದರ್ಶನಗಳನ್ನು ಸಹ ತಿಳಿಸಿದರು.
ಯಶೋಧಾ ವರಲ್ಫೇರ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಿ.ಆರ್. ಅಗ್ನಿಹೋತ್ರಿ ಮಾತನಾಡಿ, ತರಬೇತಿ ಪೂರೈಸಿದ ನಂತರ ತಾವು ನೈತಿಕತೆಯಿಂದ ಉದ್ಯೋಗ ಆರಂಭಿಸಬೇಕು.
ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ. ನಾಯಕ ಮಾತನಾಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿರ್ವಹಣಾ ಸಮಿತಿ ಸದಸ್ಯ ಡಾ. ಗೋಪಾಲಕೃಷ್ಣ ಕಮಲಾಪುರ ಅಧ್ಯಕ್ಷತೆ ವಹಿಸಿದ್ದರು. 45 ದಿನಗಳ ತರಬೇತಿ ಪಡೆದ 13 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜಯಂತ ಕೆ.ಎಸ್., ಶ್ರೀಕಾಂತ ಏರಿ, ಶಶಿಧರ ಕೆ.ಎಂ., ಪರ್ವತಗೌಡ ಶಲವಡಿ, ಮಲ್ಲಪ್ಪ ಹಂಪಣ್ಣವರ, ಮಯೂರ ಜೋಳದ, ಇತರರು ಇದ್ದರು. ಆನಂದ ಅಗ್ನಿಹೋತ್ರಿರವರು ಸ್ವಾಗತಿಸಿದರು. ರಾಘವೇಂದ್ರ ಹೊನ್ನಳ್ಳಿ ನಿರೂಪಿಸಿದರು.