ಆರ್.ತುಳಸಿಕುಮಾರ್
ಬೆಂಗಳೂರು: ಡಾ. ಕೆ.ಶಿವರಾಮ ಕಾರಂತ ಬಡಾವಣೆಗೆ ಜಮೀನು ಸ್ವಾಧೀನವಾಗದಿದ್ದರೂ, ಅಂತಹ ಪ್ರದೇಶಗಳಲ್ಲಿ ಮನೆ ನಿರ್ಮಿಸದಂತೆ ರೈತರು ಹಾಗೂ ಸಾರ್ವಜನಿಕರಿಗೆ ನೋಟಿಸ್ ನೀಡುವ ಮೂಲಕ ಬಿಡಿಎ ಮತ್ತೊಮ್ಮೆ ನಿಯಮಬಾಹಿರ ಕ್ರಮಕ್ಕೆ ಮುಂದಾಗಿದೆ.
ಕೆಲ ತಿಂಗಳ ಹಿಂದೆಯಷ್ಟೇ ನಾಗರಿಕರು ನಿರ್ಮಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಮೂಲಸೌಕರ್ಯ ಕಲ್ಪಿಸದಂತೆ ಬೆಸ್ಕಾಂಗೆ ಪತ್ರ ಬರೆದು ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಡಿಎ, ಇದೀಗ ಮತ್ತೇ ಅದೇ ತಪ್ಪನ್ನು ಮಾಡಲು ಹೊರಟಂತಿದೆ. ಸ್ವಾಧೀನಪಡಿಸಿಕೊಳ್ಳದ ಜಮೀನಿನ ಮೇಲೆ ಬಿಡಿಎಗೆ ಯಾವುದೇ ಹಕ್ಕು ಇರದು. ಜತೆಗೆ ಹಳ್ಳಿಗಳ ಗ್ರಾಮಠಾಣಾ ಹಾಗೂ ಅನುಮೋದಿತ ಲೇಔಟ್ಗಳಲ್ಲಿ ಮನೆ ನಿರ್ಮಿಸಬಾರದೆಂದು ನೋಟಿಸ್ ನೀಡುವ ಅಧಿಕಾರ ಪ್ರಾಧಿಕಾರಕ್ಕೆ ಇಲ್ಲ. ಹೀಗಿದ್ದರೂ, ಮುಂಬರುವ ದಿನಗಳಲ್ಲಿ ಶಿವರಾಮ ಕಾರಂತ ವಿಸ್ತರಿತ ಲೇಔಟ್ ರಚಿಸುವ ನೆಪದಲ್ಲಿ ನಾಗರಿಕರಿಗೆ ನೋಟಿಸ್ ನೀಡಿ ಮನೆ ನಿರ್ಮಾಣ ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಗೊಳಿಸುವಂತೆ ಬಿಡಿಎ ಇಂಜಿನಿಯರ್ಗಳು ತಾಕೀತು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕಾರಂತ ಬಡಾವಣೆ 17 ಗ್ರಾಮಗಳಿಗೆ ಸೇರಿದ 3,546 ಎಕರೆ ಜಮೀನಿನಲ್ಲಿ ತಲೆಯೆತ್ತುತ್ತಿದೆ. ಸಿವಿಲ್ ಕಾಮಗಾರಿ ನಡೆಯುತ್ತಿದ್ದರೂ, ಸಕಲ ಮೂಲಸೌಕರ್ಯ ಕಲ್ಪಿಸಲು ಇನ್ನೂ 2-3 ವರ್ಷ ಹಿಡಿಯಲಿದೆ. ವಸ್ತುಸ್ಥಿತಿ ಹೀಗಿದ್ದರೂ, ವಿಸ್ತರಿತ ಕಾರಂತ ಲೇಔಟ್ಗಾಗಿ ಮತ್ತೆ 11 ಹಳ್ಳಿಗಳಿಗೆ ಸೇರಿದ 2,095 ಎಕರೆ ಸ್ವಾಧೀನ ಪಡಿಸಿಕೊಳ್ಳಲು ಸರ್ವೆ ನಡೆಸಲಾಗುತ್ತಿದೆ. ಸರ್ಕಾರದಿಂದ ಇನ್ನೂ ಅಧಿಕೃತವಾಗಿ ಬಡಾವಣೆಗೆ ಭೂಸ್ವಾಧೀನ ಸೇರಿ ಇನ್ನಿತರ ಕಾರ್ಯಕ್ಕೆ ಅನುಮತಿ ಇಲ್ಲದಿದ್ದರೂ, ಪ್ರಾಧಿಕಾರವು ಹೊಸ ಲೇಔಟ್ಗಾಗಿ ಅತ್ಯುತ್ಸಾಹ ತೋರಿಸುತ್ತಿದೆ. ಇದರಿಂದಾಗಿ ಕಾರಂತ ಬಡಾವಣೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅನುಮೋದಿತ ಲೇಔಟ್ಗಳಲ್ಲೂ ಮನೆ ನಿರ್ಮಿಸದಂತೆ ನೋಟಿಸ್ ನೀಡುತ್ತಿರುವುದು ಕಾನೂನುಬಾಹಿರ ಎಂದು ಸ್ಥಳೀಯರು ತೀವ್ರ ಆಕ್ಷೇಪ ಎತ್ತಿದ್ದಾರೆ.
ತಪ್ಪು ಮಾಹಿತಿ ನಮೂದಿಸಿ ನೋಟಿಸ್?:
ಕಾರಂತ ಲೇಔಟ್ಗೆ ಹೊಂದಿಕೊಂಡಿರುವ ಜೆ.ಬಿ.ಕಾವಲ್ ಗ್ರಾಮದ ಸರಹದ್ದಿನಲ್ಲಿ ಅನ್ನಪೂರ್ಣೇಶ್ವರಿ ಬಡಾವಣೆ ಎಂಬ ಖಾಸಗಿ ಲೇಔಟ್ ನಿರ್ಮಿಸಲಾಗಿದೆ. 2020ರಲ್ಲೇ ಡಿಸಿ ಪರಿವರ್ತನೆ ಪ್ರಮಾಣಪತ್ರ ಪಡೆದ ಬಳಿಕ ಅಲ್ಲಿ ಸೈಟ್ದಾರರು ಸ್ವಂತ ಸೂರು ನಿರ್ಮಿಸಿಕೊಳ್ಳುತ್ತಿದ್ದಾರೆ. ಹೀಗಾಗಲೇ ಆರು ಮನೆಗಳಲ್ಲಿ ವಾಸವಿದ್ದು, ಇನ್ನೂ 18 ಮಂದಿಯ ಮನೆ ನಿರ್ಮಾಣ ವಿವಿಧ ಹಂತಗಳಲ್ಲಿವೆ. ಮೇ 21ರಂದು ಬಿಡಿಎ ಇಂಜಿನಿಯರ್ಗಳು 20 ಮಂದಿ ಸೈಟ್ದಾರರಿಗೆ ಮನೆ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸದಂತೆ ಖುದ್ದು ಸ್ಥಳಕ್ಕೆ ಆಗಮಿಸಿ ನೋಟಿಸ್ ನೀಡಿದ್ದಾರೆ. 15 ದಿನಗಳಲ್ಲಿ ನೋಟಿಸ್ಗೆ ಉತ್ತರಿಸದಿದ್ದಲ್ಲಿ ನಿರ್ಮಾಣ ಹಂತದ ಮನೆಗಳನ್ನು ತೆರವುಗೊಳಿಸುವುದಾಗಿ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೆ, ನೋಟಿಸ್ನಲ್ಲಿ ನಮೂದಿಸಿದಂತೆ ಜೆ.ಬಿ. ಕಾವಲ್ನ ಸ.ನಂ. 67ರ ಜಮೀನು ಕಾರಂತ ಲೇಔಟ್ಗೆ ಸ್ವಾಧೀನವಾಗಿಲ್ಲ. ಇದನ್ನು ಸ್ವತ: ಪ್ರಾಧಿಕಾರ ಹಿಂದೆಯೇ ದೃಢೀಕರಿಸಿ ಎನ್ಒಸಿ ನೀಡಿದೆ. ಈ ಮಾಹಿತಿ ಅರಿಯದೆ ಇಂಜಿನಿಯರ್ಗಳು ನಾಗರಿಕರನ್ನು ಬೆದರಿಸಲು ನೋಟಿಸ್ನಲ್ಲಿ ತಪ್ಪು ಮಾಹಿತಿ ನಮೂದಿಸಿ ನಮ್ಮ ಸೂರಿನ ಕನಸನ್ನು ಕಸಿಯಲು ಬಿಡಿಎ ಮುಂದಾಗಿದೆ ಎಂದು ಅನ್ನಪೂರ್ಣೇಶ್ವರಿ ಲೇಔಟ್ನ ಸೈಟ್ದಾರರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಈ ವಿಷಯವಾಗಿ ಕಾರಂತ ಲೇಔಟ್ ಉಪ ವಿಭಾಗದ ಇಂಜಿನಿಯರ್ಗಳಿಂದ ಸಮಜಾಯಿಷಿ ಪಡೆಯಲು ಕರೆ ಮಾಡಿದರೂ ಸಮರ್ಪಕ ಉತ್ತರ ನೀಡದಿರುವುದು ಅನುಮಾನಕ್ಕೆ ಎಡೆಮಾಡಕೊಟ್ಟಿದೆ.
ಗ್ರಾಮಠಾಣಾ ಪ್ರದೇಶವೂ ಸ್ವಾಧೀನ:
ಯಾವುದೇ ಹಳ್ಳಿಗಳ ಗ್ರಾಮಠಾಣಾದಿಂದ 500 ಮೀಟರ್ವರೆಗೆ ಊರು ವಿಸ್ತರಿಸಲು ಸರ್ಕಾರವೇ ನಿಯಮ ರೂಪಿಸಿದೆ. ಭೂಸ್ವಾಧೀನದ ವೇಳೆ ಈ ಜಾಗವನ್ನು ಹೊರತುಪಡಿಸಿ ಅಧಿಸೂಚನೆ ಹೊರಡಿಸಬೇಕಿದ್ದರೂ, ಬಿಡಿಎ ಸರ್ಕಾರದ ನಿಯಮವನ್ನೇ ಪಾಲಿಸಿಲ್ಲ. ಇದರಿಂದ ದೊಡ್ಡ ಹಳ್ಳಿಗಳಲ್ಲಿನ ಗ್ರಾಮಠಾಣ ಪ್ರದೇಶ ಕೈತಪ್ಪಿ ಸ್ಥಳೀಯರು ಸಮಸ್ಯೆಗೆ ಒಳಗಾಗಿದ್ದಾರೆ. ಗ್ರಾಮೀಣರ ಈ ಸಮಸ್ಯೆ ಆಲಿಸಬೇಕಿದ್ದ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮೌನಕ್ಕೆ ಶರಣಾಗಿರುವುದು ಹಳ್ಳಿಗಳ ಸ್ವಂತ ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಜಿಲ್ಲಾಡಳಿತಕ್ಕೆ ದೂರು ನೀಡಲು ಸಿದ್ಧತೆ:
ಕಾರಂತ ಲೇಔಟ್ಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ಕೆಲ ಸಂಖ್ಯೆಯಷ್ಟು ಅನುಮೋದಿತ ಬಡಾವಣೆಗಳಿವೆ. ಅನಧಿಕೃತ ಲೇಔಟ್ಗಳಿದ್ದರೂ, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ನಿಯಮದಂತೆ ಲೇಔಟ್ ನಿರ್ಮಿಸಿರುವವರಿಗೂ ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವುದಕ್ಕೆ ಸ್ಥಳೀಯರು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಯಲಹಂಕ ತಹಸೀಲ್ದಾರ್ಗೆ ದೂರು ನೀಡಲು ನಿರ್ಧರಿಸಿದ್ದು, ಸದ್ಯದಲ್ಲೇ ಅಧಿಕೃತ ಪತ್ರ ನೀಡಲಿದ್ದೇವೆ ಎಂದು ಸ್ಥಳೀಯರಾದ ರಮೇಶ್ ತಿಳಿಸಿದ್ದಾರೆ.
ನಾನು ಸೇರಿ ಇತರರು ಅನ್ನಪೂಣೇಶ್ವರಿ ಲೇಔಟ್ನಲ್ಲಿ ಸೈಟ್ ಖರೀದಿ ಮನೆ ನಿರ್ಮಿಸುತ್ತಿದ್ದೇವೆ. ಅನುಮೋದಿತ ಲೇಔಟ್ ಆಗಿರುವುದರಿಂದ ಗ್ರಾಪಂನಿಂದ ಅನುಮತಿ ಪಡೆದಿದ್ದೇವೆ. ಆದರೂ ಬಿಡಿಎ ಈ ಜಮೀನು ತನಗೆ ಸೇರಿದ್ದು ಕಟ್ಟಡ ನಿರ್ಮಿಸದಂತೆ ನೋಟಿಸ್ ನೀಡಿದೆ. ಸ್ವತ: ಇಂಜಿನಿಯರ್ ಸ್ಥಳಕ್ಕೆ ಬಂದಿದ್ದರಿಂದ ಸೈಟ್ದಾರರಿಗೆ ಭಯವಾಗುತ್ತಿದ್ದು, ಸರ್ಕಾರ ನಮ್ಮ ರಕ್ಷಣೆಗೆ ಧಾವಿಸಲಿ.
– ಶ್ರೀನಿವಾಸ್, ಅನ್ನಪೂಣೇಶ್ವರಿ ಲೇಔಟ್ನ ಸೈಟ್ದಾರ