ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಹವಾಮಾನ ವೈಪರೀತ್ಯದಿಂದ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯದ ಕಾರಣ ಮಾರುಕಟ್ಟೆಗಳಲ್ಲಿ ಮೀನಿಗೆ ಬರ ಎದುರಾಗಿದ್ದು, ಹೊಳೆಮೀನಿಗೆ ಭಾರಿ ಬೇಡಿಕೆ ಬಂದಿದೆ. ವಾಯುಭಾರ ಕುಸಿತ, ಚಂಡಮಾರುತ, ಮತ್ಸೃಕ್ಷಾಮ ಸಹಿತ ಇನ್ನಿತರ ಹಲವು ಕಾರಣಗಳಿಂದಾಗಿ ಕೆಲತಿಂಗಳಿನಿಂದ ಸರಿಯಾಗಿ ಮೀನುಗಾರಿಕೆಯೇ ನಡೆದಿಲ್ಲ. ಈತನ್ಮಧ್ಯೆ ಮಳೆಗಾಲದಲ್ಲಿ ನಡೆಯುತ್ತಿದ್ದ ನಾಡದೋಣಿ ಮೀನುಗಾರಿಕೆ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನು ದೊರೆಯುತ್ತಿಲ್ಲ. ಮೀನುಗಾರರು ಪಂಚಗಂಗಾವಳಿ ಹೊಳೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಹೊಳೆಯಲ್ಲಿ ದೊರೆಯುವ ಮೀನಿಗೆ ಭಾರಿ ಬೇಡಿಕೆ ಬಂದಿದೆ. ಇದರಿಂದ ದಿನದಿಂದ ದಿನಕ್ಕೆ ಮೀನಿನ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಹೇಗಿದೆ ಮೀನಿನ ದರ?
ಎಲ್ಲ ಮೀನಿಗೂ ಬರ ಬಂದಿದ್ದು, ಸಿಗುವಂತಹ ಕೆಲಮೀನುಗಳಿಗೂ ಭಾರಿ ಬೆಲೆ ಬಂದಿದೆ. 1 ಕೆ.ಜಿ. ಕಂಡಿಕೆಗೆ 1,200ರಿಂದ 1,300 ರೂ. ಇದ್ದರೆ, ಬರೈ ಮೀನಿಗೆ 250-300 ರೂ.ವರೆಗೆ ಇದೆ. 1 ಕೆ.ಜಿ.ನಂಗ್(ಲ್ಯಾಂಪ್) ಮೀನಿಗೆ 250-300 ರೂ. ಇದ್ದರೆ ಹೊಳೆ ಜಾರಿಗೆ ಕೆ.ಜಿ.ಗೆ 450 ರೂ. ಇದೆ. ಹೊಳೆ ಬಯ್ಗೆ ಕೆ.ಜಿಗೆ 450-500 ರೂ. ಮತ್ತು ಹೊಳೆ ಚಟ್ಲಿ(ಚಿಕ್ಕದು) 300-400 ರೂ.ವರೆಗೂ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ದೊರೆಯುವ ಇತರ ಜಾತಿಯ ಮೀನುಗಳು ಬೆಲೆ ಕೂಡ ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಜನರು ಹಿಂದೇಟು ಹಾಕುವ ಪರಿಸ್ಥಿತಿ ಉದ್ಭವಿಸಿದೆ ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ.
ಖಾದ್ಯವೂ ದುಬಾರಿ
ಮೀನಿನ ಬರದ ಬಿಸಿ ಹೋಟೆಲ್ ಉದ್ಯಮಕ್ಕೂ ತಟ್ಟಿದ್ದು, ಮೀನಿನ ಕೊರತೆಯಿಂದ ಸರ್ವೇ ಸಾಮಾನ್ಯವಾಗಿ ಮೀನಿನ ದರ ಏರಿಕೆಯಾಗಿದೆ. ಇದರಿಂದ ಮಾಂಸಾಹಾರಿ ಹೋಟೆಲ್ಗಳಲ್ಲೂ ಮೀನಿನ ಖಾದ್ಯದ ಬೆಲೆಯಲ್ಲಿಯೂ ತುಸು ಏರಿಕೆಯಾಗಿದೆ.
ಮಳೆ ಕೊರತೆ ಕಾರಣ
ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಿದ್ದರೂ, ಉತ್ತಮ ಮಳೆಯಾಗದಿರುವುದರಿಂದ ಮತ್ತು ಕಡಲು ಪ್ರಕ್ಷುಬ್ಧಗೊಳ್ಳದಿರುವುದರಿಂದ ಮಳೆಗಾಲದ ಸಾಂಪ್ರದಾಯಿಕ ಮೀನುಗಾರಿಕೆ ಈ ಬಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆಯೇ ಪ್ರಧಾನ ಉದ್ಯೋಗವಾಗಿರುವುದರಿಂದ ಮೀನುಗಾರರು ನಾಡದೋಣಿ ಮೂಲಕ ಗಂಗೊಳ್ಳಿ, ಕಂಚುಗೋಡು, ಮರವಂತೆ, ಕೊಡೇರಿ, ಉಪ್ಪುಂದ ಭಾಗಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಉತ್ತಮ ಮಳೆಯಾಗಿ ಅನುಕೂಲ ಹವಾಮಾನ ಸೃಷ್ಟಿಯಾದರೆ ಮಾತ್ರ ಮಳೆಗಾಲದ ನಾಡದೋಣಿ ಮೀನುಗಾರಿಕೆ ಉತ್ತಮವಾಗಿ ನಡೆಯಲು ಸಾಧ್ಯ.
ಈ ವರ್ಷ ಯಾವುದೇ ಬೋಟು, ದೋಣಿಗಳಿಗೂ ಹೆಚ್ಚಿನ ಪ್ರಮಾಣದ ಆದಾಯ ಆಗಿಲ್ಲ. ಈವರೆಗೆ ಪ್ರತಿಕೂಲ ಹವಾಮಾನ, ಮತ್ಸೃಕ್ಷಾಮ ಸಹಿತ ಇನ್ನಿತರ ಕಾರಣದಿಂದಾಗಿ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಹಾಗೂ ಹೊಳೆ ಮೀನಿಗೆ ಹೆಚ್ಚು ಬೇಡಿಕೆ ಇರುವುದರಿಂದ ಮೀನು ದರ ಏರಿಕೆಗೆ ಕಾರಣವಾಗಿದೆ.
-ಚಂದ್ರ ಖಾರ್ವಿ, ಮೀನುಗಾರರು, ಗಂಗೊಳ್ಳಿ