ಬೆಂಗಳೂರು: ಪಕ್ಕದ ಮನೆಯ ಬೀಗ ತೆರೆದು 10 ಗ್ರಾಂ ಚಿನ್ನ ಕಳವು ಮಾಡಿದ್ದ ಯುವಕನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಜಯನಗರ 7ನೇ ಬ್ಲಾಕ್ ನಿವಾಸಿ ವೆಂಕಟೇಶ್ (22) ಬಂಧಿತ. 80 ಸಾವಿರ ರೂ. ಮೌಲ್ಯದ 10 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ದೂರುದಾರ, ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಪಕ್ಕದ ಮನೆಗೆ ಕೊಟ್ಟು ಊರಿಗೆ ಹೋಗಿದ್ದರು. ಈ ಸಮಯವನ್ನೇ ದುರುಪಯೋಗಪಡಿಸಿಕೊಂಡ ವೆಂಕಟೇಶ್, ಮನೆಗೆ ಬೀಗ ತೆಗೆದು ಬೀರು ಕೀ ಮೀಟಿ ಚಿನ್ನಾಭರಣ ಕಳವು ಮಾಡಿದ್ದ.
ಸಂಜೆ ದೂರುದಾರರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮನೆ ಮಾಲೀಕರು ದೂರು ಸಲ್ಲಿಸಿ ಅನುಮಾನ ವ್ಯಕ್ತಪಡಿಸಿದ್ದರು. ಇದರ ಮೇರೆಗೆ ವೆಂಕಟೇಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಜಯನಗರದಲ್ಲಿ ಕಾರು ತೊಳೆಯುವ ಕೆಲಸಕ್ಕೆ ಹೋಗುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.