ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರವು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಇರುವುದನ್ನು ಖಂಡಿಸಿ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿದರು.
ಕೆಂಪೇಗೌಡ ಜಯಂತಿಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಆಹ್ವಾನಿಸಿಲ್ಲ ಎಂಬ ವಿಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಕೆಂಪೇಗೌಡ ಸ್ಥಬ್ಧ ಚಿತ್ರ ಮೆರವಣಿಗೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮುಂದೇಯೇ ಜೆಡಿಎಸ್&ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಗಳ ನಡೆಯಿತು. ಪರಸ್ವರ ಹೊಡೆದಾಟಕ್ಕೂ ಮುಂದಾದರು. ಪೊಲೀಸರ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ವೇದಿಕೆಯಲ್ಲಿದ್ದ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಧ್ಯ ಪ್ರವೇಶ ಮಾಡಿ, ನೀವಿಲ್ಲಿ ರಾಜಕೀಯ ಮಾಡಲು ಬಂದಿದ್ದರೆ ನನಗೂ ರಾಜಕೀಯ ಮಾಡಲು ಗೊತ್ತಿದೆ. ನೋಡ್ತೀರಾ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಅವಾಜ್ ಹಾಕಿದರು.
ಇದೇ ವೇಳೆ ವೇದಿಕೆ ಮೇಲಿದ್ದ ನವೀನ್ ಕುಮಾರ್ ಜೆಡಿಎಸ್ ಕಾರ್ಯಕರ್ತರನ್ನು ಹೊಡೆಯಲು ಮುಂದಾದ. ಪೊಲೀಸರು ನವೀನನ್ನು ಹಾಗೂ ಪ್ರತಿಭಟಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ಸಹ ಪೊಲೀಸರು ಥಳಿಸಿ ಹೊರ ಕಳುಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಸಮಯದಾಯದವರು ಸಂಟಿತರಾಗುವುದರ ಜತೆಗೆ, ಸಣ್ಣಪಟ್ಟ ಗೊಂದಲಗಳಿಗೆ ಜಗಳ ಮಾಡಿಕೊಳ್ಳಬಾರದು, ಸಮುದಾಯದ ಹೇಳಿಗೆಗಾಗಿ ಗಣ್ಯರು ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಕರೆ ನೀಡಿದರು.
ಡಿಜೆ ಹಾಕದಂತೆ ಅನ್ಯ ಕೋಮಿನವರಿಂದ ಅಡ್ಡಿ
ವೇಮಗಲ್, ಅರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳು ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾಗ, ಅನ್ಯ ಕೋಮಿನ ಮುಖಂಡರು ದಾರಿಯುದ್ದಕ್ಕೂ ತೆರಳಬೇಕಾದರೆ ಡಿಜೆ ಅ್ ಮಾಡಿಕೊಂಡು ಹೋಗಿ, ಜತೆಗೆ ದೇವರ ಹಾಡುಗಳನ್ನು ಹಾಕಬಾರದು ಎಂದು ತಾಕೀತು ಮಾಡಿದರು. ಆವೇಳೆ ಒಕ್ಕಲಿಗರ ಸಮುದಾಯದ ಮುಖಂಡರು ಹಾಗೂ ಅನ್ಯ ಕೋಮಿನ ಮುಖಂಡರ ನಡುವೆ ವಾಗ್ವಾದ ಉಂಟಾಯಿತು.
ಹನುಮಾನ್ ಸೇರಿದಂತೆ ಭಕ್ತಿ ಗೀತೆಗಳನ್ನು ಈ ರಸ್ತೆಯಲ್ಲಿ ಹಾಕಬೇಡಿ ಎಂದು ಹೇಳಿದಕ್ಕೆ ಕೆರಳಿದ ಒಕ್ಕಲಿಗ ಸಮುದಾಯದ ಮುಖಂಡರು ತೀವ್ರ ಆಕ್ರೋಶವ್ಯಕ್ತಪಡಿಸಿ ರಸ್ತೆ ತಡೆ ಮಾಡಲು ಮುಂದಾದರು.
ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಗಲ್ಪೇಟೆ ಪೊಲೀಸರು ಎರಡು ಕಡೆಯ ಮುಖಂಡರನ್ನು ಸಮಧಾನಪಡಿಸಿದರು.