ಶಾಲೆಗೆ ಸಂಪರ್ಕಿಸುವ ಮಾರ್ಗ ಕಡಿತ | ಸರ್ವೀಸ್ ರಸ್ತೆ ನಿರ್ಮಿಸಲು ಒತ್ತಾಯ
ವಿಜಯವಾಣಿ ಸುದ್ದಿಜಾಲ ಉಡುಪಿ
ಸಮರ್ಪಕ ಸಂಪರ್ಕ ರಸ್ತೆಯೇ ಇಲ್ಲದೆ ಪ್ರತಿದಿನ ಪರಿತಪಿಸುತ್ತಿರುವ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಮುಖ್ಯೋಧ್ಯಾಪಕರು ಸಂಸದ ಹಾಗೂ ಶಾಸಕರಲ್ಲಿ ಅಳಲು ತೋಡಿಕೊಂಡರು.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆಗೆಂದು ಶುಕ್ರವಾರ ಇಂದ್ರಾಳಿಗೆ ಭೇಟಿ ನೀಡಿದ್ದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಶಾಸಕ ಯಶ್ಪಾಲ್ ಸುವರ್ಣ ಅವರಲ್ಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ ಶಿಕ್ಷಕರು, ನಿತ್ಯದ ಸಮಸ್ಯೆ ವಿವರಿಸಿದರು.
ದಿನವೂ ಜೀವಭಯ
ಪ್ರೌಢಶಾಲೆ ವಿಭಾಗದ ಮುಖ್ಯೋಧ್ಯಾಪಕ ವಿನಾಯಕ ಕಿಣಿ ಮಾತನಾಡಿ, ಇಂದ್ರಾಳಿಯಲ್ಲಿ ರೈಲ್ವೆ ಸೇತುವೆ ನಿರ್ಮಿಸಲೆಂದು ಸಗ್ರಿ ಸಂಪರ್ಕ ರಸ್ತೆ ತುಂಡರಿಸಿದ್ದರಿಂದ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಸೇತುವೆಯ ಒಂದು ಭಾಗದಲ್ಲಿ ದಿನವೂ ಅಪಾಯಕರ ರೀತಿಯಲ್ಲಿ ಪಾಲಕರು ಮಕ್ಕಳನ್ನು ದಾಟಿಸಿಕೊಂಡು ಶಾಲೆಗೆ ಬರುವಂತಾಗಿದೆ. ನಮಗೆ ದಿನವೂ ಮಕ್ಕಳ ಜೀವ ರಕ್ಷಣೆ ವಿಚಾರದಲ್ಲಿ ಭಯ ಆವರಿಸುತ್ತಿದ್ದು, ಇಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ವಿನಂತಿಸಿದರು.
![UDP-29-2A-School](https://cdn.vvimgs.com/wp-content/uploads/2024/06/UDP-29-2A-School-scaled-e1719669173935.jpg)
ಟ್ರಾಫಿಕ್ ಪೊಲೀಸ್ ನೇಮಿಸಿ
ಪ್ರಾಥಮಿಕ ವಿಭಾಗದ ಮುಖ್ಯೋಧ್ಯಾಪಕಿ ರೇಶ್ಮಾ ಪ್ರಭು ಮಾತನಾಡಿ, ಇಂದ್ರಾಳಿ ಜಂಕ್ಷನ್ನಲ್ಲಿ ಅತಿಯಾದ ವಾಹನ ದಟ್ಟಣೆ ಇರುತ್ತದೆ. ಬೆಳಗ್ಗೆ ಶಾಲೆ ಆರಂಭದ ಅವಧಿಯಲ್ಲಿ ಹಾಗೂ ಸಂಜೆ ಶಾಲೆ ಬಿಡುವ ಅವಧಿಯಲ್ಲಿ ಇಲ್ಲಿ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಮಾಡಬೇಕು. ಸಂಬಂಧಪಟ್ಟವರಿಗೆ ಈ ಕುರಿತು ಅನೇಕ ಬಾರಿ ಮನವಿ ನೀಡಿದ್ದರೂ ಸಹ ಸಮರ್ಪಕ ಸ್ಪಂದನೆ ಲಭಿಸುತ್ತಿಲ್ಲ. ಪ್ರತಿದಿನವೂ ಶಾಲೆಯ ಶಿಕ್ಷಕೇತರ ಸಿಬ್ಬಂದಿಗಳು ಮಕ್ಕಳನ್ನು ರಸ್ತೆ ದಾಟಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಭರವಸೆ ನೀಡಿದ ಶಾಸಕ ಯಶ್ಪಾಲ್
ಶಿಕ್ಷಕರ ಅಹವಾಲು ಸ್ವೀಕರಿಸಿದ ಶಾಸಕ ಯಶ್ಪಾಲ್, ಮೇಲ್ಸೇತುವೆ ಕಾಮಗಾರಿ ಮುಗಿದ ಬಳಿಕ ಶಾಲೆಗೆ ಸಂಪರ್ಕ ಸರಳವಾಗುವಂತೆ ಸರ್ವೀಸ್ ರಸ್ತೆ ನಿರ್ಮಿಸಿಕೊಡುವಂತೆ ಸ್ಥಳದಲ್ಲಿಯೇ ಇದ್ದ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಈಗಿರುವ ರಸ್ತೆ ಮಳೆಯಿಂದಾಗಿ ರಾಡಿಯಾಗಿದ್ದು ಸಂಚಾರಕ್ಕೆ ತೊಡಕಾಗಿದೆ. ಕೂಡಲೇ ಗ್ರಿಟ್ ಹಾಕಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು.
![UDP-29-2B-School](https://cdn.vvimgs.com/wp-content/uploads/2024/06/UDP-29-2B-School-scaled.jpg)