ಕಲಘಟಗಿ: ಪಟ್ಟಣದಲ್ಲಿನ ಆಧಾರ್ ನೋಂದಣಿ ಕೇಂದ್ರ ಸ್ಥಗಿತಗೊಂಡಿದ್ದು, ನಾಗರಿಕರು ಎಲ್ಲದಕ್ಕೂ ಅವಶ್ಯವಾಗಿರುವ ಆಧಾರ್ ಹೊಸದಾಗಿ ಮಾಡಿಸಲು, ಹೆಸರು, ವಿಳಾಸ ಮತ್ತಿತರ ತಿದ್ದುಪಡಿಗಾಗಿ ಪರದಾಡುವಂತಾಗಿದೆ.
ಪಟ್ಟಣದಲ್ಲಿ ಕಳೆದ ವರ್ಷ ಸ್ಟೇಟ್ ಬ್ಯಾಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಅಂಚೆ ಕಚೇರಿ, ತಹಸೀಲ್ದಾರ್ ಕಚೇರಿ ಹಾಗೂ ಇತರೆಡೆ ಆಧಾರ್ ನೋಂದಣಿ, ತಿದ್ದುಪಡಿ ಕೇಂದ್ರ ತೆರೆಯಲಾಗಿತ್ತು. ಆದರೆ, ಕಳೆದ ಆರು ತಿಂಗಳಿನಿಂದ ಈ ಎಲ್ಲ ಕೇಂದ್ರಗಳು ಮುಚ್ಚಿವೆ. ಹೀಗಾಗಿ, ಜನಸಾಮಾನ್ಯರಿಗೆ ತೊಂದರೆಯಾಗಿದೆ.
ಪಡಿತರ ಚೀಟಿ, ಬ್ಯಾಂಕ್ ಖಾತೆ ತೆರೆಯಲು, ಜಾತಿ, ಆದಾಯ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಕೆಗೆ, ಕಂದಾಯ, ಕೃಷಿ ಮತ್ತಿತರ ಇಲಾಖೆಗಳ ಸೌಲಭ್ಯ ಪಡೆಯಲು ಆಧಾರ್ ಅವಶ್ಯವಾಗಿದೆ. ಆಧಾರ್ ನೋಂದಣಿ ಕೇಂದ್ರಗಳು ತಾಲೂಕಿನಾದ್ಯಂತ ಸ್ಥಗಿತಗೊಂಡು ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ತಮ್ಮ ಉದ್ಯೋಗ, ವಿದ್ಯಾಭ್ಯಾಸ ಬಿಟ್ಟು ಹುಬ್ಬಳ್ಳಿ-ಧಾರವಾಡಕ್ಕೆ ಹೋಗುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಯ ಆಧಾರ್ ನೋಂದಣಿ ಕೇಂದ್ರದ ಸಿಬ್ಬಂದಿಯ ಐಡಿ ರದ್ದಾಗಿರುವುದರಿಂದ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಈ ಕೇಂದ್ರಲ್ಲಿನ ಪ್ರಿಂಟರ್, ಕ್ಯಾಮರಾ, ಟೇಬಲ್, ಕುರ್ಚಿ ಸೇರಿದಂತೆ ನೊಂದಣಿಗೆ ಬೇಕಿದ್ದ ವಸ್ತುಗಳೆಲ್ಲ ಧೂಳು ತಿನ್ನುತ್ತಿವೆ. ಕೇಂದ್ರಗಳು ಸ್ಥಗಿತಗೊಂಡಿರುವ ಮಾಹಿತಿ ಇಲ್ಲದ ಜನರು ಪ್ರತಿನಿತ್ಯವೂ ಬಂದು ಹೋಗುತ್ತಾರೆ. ಈ ಹಿಂದೆ ಕೇಂದ್ರಗಳಿದ್ದಲ್ಲಿಗೆ ತೆರಳಿ ವಿಚಾರಿಸುತ್ತಿದ್ದಾರೆ. ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ.
ನಮ್ಮ ಸಿಬ್ಬಂದಿ ಐಡಿ ರದ್ದಾದ ಕಾರಣ ನೋಂದಣಿ ಮಾಡಲಾಗುತ್ತಿಲ್ಲ. ಐಡಿ ಬಂದ ತಕ್ಷಣ ಮತ್ತೆ ನೋಂದಣಿ ಕಾರ್ಯ ಆರಂಭಿಸಲಾಗುವುದು.
ಯಲ್ಲಪ್ಪ ಗೋಣೆಣ್ಣವರ, ತಹಸೀಲ್ದಾರ್ ಕಲಘಟಗಿ
ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ನೋಂದಣಿ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲ. ಕೇಂದ್ರಕ್ಕೆ ತೆರಳಿ ವಿಚಾರಿಸಿ ಸಾಕಾಗಿದ್ದರಿಂದ ಹುಬ್ಬಳ್ಳಿಗೆ ಹೋಗಿ ಮಕ್ಕಳ ಆಧಾರ್ ತಿದ್ದುಪಡಿ ಮಾಡಿಕೊಂಡು ಬಂದಿದ್ದೇವೆ. ಆಧಾರ್ ಸೇವೆ ಇಲ್ಲವಾದರೆ ತಹಸೀಲ್ದಾರ್ ಕಚೇರಿ ಇದ್ದು ಇಲ್ಲದಂತೆ. ಪಟ್ಟಣದಲ್ಲಿ ಆಧಾರ್ ನೋಂದಣಿ ಕೇಂದ್ರ ಕೂಡಲೇ ಆರಂಭಿಸಬೇಕು.
ಭೀಮಪ್ಪ ನೀಲಣ್ಣವರ, ಸಾರ್ವಜನಿಕ ಕಲಘಟಗಿ