ಅಳವಂಡಿ: ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಆಸಕ್ತಿ ರೂಢಿಸಿಕೊಳ್ಳಿ ಎಂದು ಸಾಹಿತಿ, ಶಿಕ್ಷಕ ಯಲ್ಲಪ್ಪ ಹರ್ನಾಳಗಿ ಹೇಳಿದರು.
ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಸಾಪ ಅಳವಂಡಿ ಹೋಬಳಿ ಘಟಕ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಶಸ್ವಿ ಸಾಹಿತಿ ಹಿಂದೆ ಪ್ರೇರಕ ಶಕ್ತಿಯಾಗಿ ಮಹಿಳೆ ಇದ್ದಾಳೆ. ಈ ಹಿಂದೆ ಸಾಹಿತ್ಯವನ್ನು ವಿದ್ಯೆ ಇಲ್ಲದವರೂ ಕೂಡ ರಚಿಸಿದ್ದಾರೆ. ಅದರಲ್ಲೂ ಮಹಿಳೆಯರಂತು ತೊಟ್ಟಿಲುಪದ, ಮದುವೆ-ಮುಂಜಿ, ಮನೆಯಲ್ಲಿ ನಡೆಯುವ ಇತರ ಶುಭಕಾರ್ಯಗಳಲ್ಲಿ ಹಾಡು ರಚಿಸಿ ಸಾಹಿತ್ಯವನ್ನು ಬೆಳೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ಬಂದ ಮೇಲೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಡಿದ್ದಾರೆ ಎಂದರು.
ವಿದ್ಯಾರ್ಥಿಗಳು ಸಾಹಿತ್ಯ ಬರುವುದಿಲ್ಲವೆಂದು ಹಿಂಜರಿಕೆ ಪಡಬಾರದು. ಸಾಹಿತ್ಯ ರಚಿಸಬೇಕು. ಅದರಲ್ಲಿ ತಪ್ಪುಗಳನ್ನು ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸಿ ತಿದ್ದಿಕೊಂಡು ರಚಿಸಬೇಕು. ಉತ್ತಮ ಸಾಹಿತ್ಯ ರಚನೆಯನ್ನು ಸಮಾಜ ಗುರುತಿಸಲಿದೆ. ಹೀಗಾಗಿ ಎಲ್ಲರೂ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸಬೇಕು. ಸ್ವಯಂ ಪ್ರತಿಭೆಯಿಂದ ಮುಂದೆ ಬರಬೇಕು ಎಂದರು.
ಸಾಹಿತಿ ನೀಲಪ್ಪ ಹಕ್ಕಂಡಿ ಮಾತನಾಡಿ, ಕನ್ನಡ ಭಾಷೆ ಮನಸ್ಸಿಗೆ ಮುದ ನೀಡುತ್ತದೆ. ಪಟ್ಟಣ ಪ್ರದೇಶಗಳಲ್ಲಿ ಕನ್ನಡ ನಾಶವಾಗುವ ಹಂತಕ್ಕೆ ತಲುಪಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇದರ ಬೇರುಗಳು ಗಟ್ಟಿಯಾಗಿವೆ. ಭಾಷೆ ಉಳಿವಿಗೆ ಎಲ್ಲರೂ ಹೋರಾಡಬೇಕಾಗಿದೆ. ಕರುಳಿಗೆ ಕಕ್ಕುಲತೆ ತಿಳಿಸುವ ಕನ್ನಡ ಭಾಷೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದೆ. ಗೀಗಿ ಪದ, ಜಾನಪದ ಕಲೆ, ಹಂತಿ ಪದ, ಮುಂತಾದವುಗಳ ಜನರ ಮನಸ್ಸನ್ನು ಒಗ್ಗೂಡಿಸುತ್ತಿವೆ. ಕನ್ನಡ ಕೇವಲ ಭಾಷೆ ಅಲ್ಲ ಬದುಕು. ಆತ್ಮ, ಸಂಸ್ಕೃತಿ, ಜನಜೀವನ ಬಿಂಬಿಸುವ ಪ್ರತೀಕ ಎಂದರು.
ಸಿಆರ್ಪಿ ವಿಜಯಕುಮಾರ ಟಿಕಾರೆ, ಮಲ್ಲಪ್ಪ ಕುರಿ, ಕಿರಣ ಅಂಗಡಿ ಕನ್ನಡ ಸಾಹಿತ್ಯದ ಬೆಳವಣಿಗೆ, ಕನ್ನಡ ಸಾಹಿತ್ಯ ರಚನೆ ಹಾಗೂ ಮಕ್ಕಳು ಸಾಹಿತ್ಯ ರಚಿಸುವ ಕುರಿತು ಮಾತನಾಡಿದರು. ನಂತರ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಜಯಾ ತಳಗೇರಿ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ, ಶಿಕ್ಷಕರಾದ ಪಕೀರಮ್ಮ ಮಠದ, ಸುನೀತಾ, ಇಸರತ್ಬಾನು, ಸುಜಾತಾ, ಸವಿತಾ, ಶ್ರುತಿ, ನಿಲಯ ಮೇಲ್ವಿಚಾರಕಿ ಚನ್ನಮ್ಮ ಚಿನ್ನೂರು, ಪ್ರಮುಖರಾದ ಜೂನುಸಾಬ ವಡ್ಡಟ್ಟಿ ಇತರರಿದ್ದರು.