ವಿರಾಜಪೇಟೆ: ಇಲ್ಲಿನ ಕಾವೇರಿ ಕಾಲೇಜು ಬಳಿ ಬಸ್ ಹಿಂದಿಕ್ಕುವ ತವಕದಲ್ಲಿ ದ್ವಿಚಕ್ರ ವಾಹನ ಸವಾರ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೂಲತಃ ಚಿಕ್ಕಮಗಳೂರು ನಿವಾಸಿ ಹಾಲಿ ಬಾಳುಗೋಡುವಿನ ಹೋಟೆಲ್ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್ಕುಮಾರ್ (27) ಗಾಯಗೊಂಡವನು.
ಬಿಟ್ಟಂಗಾಲ-ಬಾಳುಗೋಡು ರಸ್ತೆಯಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ನವೀನ್ಕುಮಾರ್ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತಿದ್ದ. ಭಾನುವಾರ ಮಧ್ಯಾಹ್ನ ನವೀನ್ಕುಮಾರ್ ತನ್ನ ದ್ವಿಚಕ್ರ ವಾಹನದಲ್ಲಿ ನಗರದಿಂದ ವಸ್ತುಗಳನ್ನು ಖರೀದಿಸಿ ಹಿಂದಿರುಗುವಾಗ ಕಾವೇರಿ ಕಾಲೇಜು ಮುಂಭಾಗದಲ್ಲಿ ಬಸ್ ಹಿಂದಿಕ್ಕುವ ತವಕದಲ್ಲಿದ್ದ. ಮಳೆಯಾದ ಕಾರಣ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಬಿದ್ದಿದೆ. ಪರಿಣಾಮ ತಲೆಗೆ ಗಾಯವಾಗಿದ್ದು ಕೂಡಲೇ ಸ್ಥಳೀಯರು ಆತನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.