ಶಿವಮೊಗ್ಗ: ಪತಿಯ ದೂರದ ಸಂಬಂಧಿಯೊಬ್ಬ ಮಾಡಿದ ಕಿತಾಪತಿಯಿಂದ ಗೃಹಿಣಿಯೊಬ್ಬಳು ದುರಂತ ಅಂತ್ಯ ಕಂಡ ಕತೆ ಇದು. ಮಹಿಳೆ ಯಾವ ತಪ್ಪನ್ನೂ ಮಾಡದಿದ್ದರೂ ಬೆನ್ನುಬಿದ್ದ ಭೂಪ, ಆಕೆಯ ಮನೆಗೆ ಬಂದು ಗಂಡನ ಎದುರಲ್ಲೇ ನಿನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿಕೊಡು ಎಂದು ರಾದ್ಧಾಂತ ಮಾಡಿದ್ದಾನೆ. ಕೊನೆಗೆ ಆಕೆಯ ಸಾವಿಗೂ ಕಾರಣವಾಗಿದ್ದಾನೆ.
ಏನಿದು ಪ್ರಕರಣ?: ಸೊರಬ ತಾಲೂಕು ಗುಂಜನೂರಿನ 28 ವರ್ಷದ ವಿವಾಹಿತೆಗೆ ಅದೇ ಗ್ರಾಮದ ವೀರೇಂದ್ರ ಎಂಬಾತನ ಪರಿಚಯವಾಗಿತ್ತು. ಆತ ಪತಿಯ ದೂರದ ಸಂಬಂಧಿಯಾಗಿದ್ದ. ಪರಿಚಯ ಮಾಡಿಕೊಂಡ ನಂತರ ವೀರೇಂದ್ರನ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ಮಹಿಳೆಯ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಹಾಗೂ ಮಾನಹಾನಿ ಮಾತುಗಳನ್ನು ಆಡತೊಡಗಿದ್ದ. ‘ನಿನ್ನ ಅಶ್ಲೀಲ ಫೋಟೋ, ವೀಡಿಯೋಗಳು ನನ್ನ ಬಳಿ ಇವೆ. ನಾವಿಬ್ಬರೂ ಖಾಸಗಿಯಾಗಿ ಕಳೆದ ಕ್ಷಣಗಳ ಫೋಟೋಗಳಿವೆ’ ಎಂದು ಸುಳ್ಳು ಸುಳ್ಳು ಹೇಳುತ್ತಾ ಆಕೆಗೆ ಮಾನಸಿಕವಾಗಿ ಹಿಂಸಿಸುತ್ತಿದ್ದ. ಆತನ ಜತೆ ಆಕೆಗೆ ಯಾವ ಸಂಬಂಧವೂ ಇರಲಿಲ್ಲವಾದರೂ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದ.
ಇಷ್ಟಕ್ಕೆ ಸುಮ್ಮನಾಗದ ವಿರೇಂದ್ರ, ಇತ್ತೀಚೆಗೆ ಆ ಮಹಿಳೆಯ ಮನೆಗೆ ಹೋಗಿದ್ದ. ಆಕೆಯ ಗಂಡನ ಎದುರೇ ‘ನಿನ್ನ ಹೆಂಡತಿಯನ್ನು ನನ್ನೊಂದಿಗೆ ಕಳುಹಿಸಿಕೊಡು’ ಎಂದು ವೀರೇಂದ್ರ ರಂಪಾಟ ಮಾಡಿದ್ದ. ಇದು ದೊಡ್ಡ ಸುದ್ದಿಯಾಗಿ ಗ್ರಾಮದ ಹಿರಿಯರು ದೇವಸ್ಥಾನದಲ್ಲಿ ಪಂಚಾಯಿತಿ ನಡೆಸಿ ವೀರೇಂದ್ರನಿಗೆ ಬುದ್ಧಿವಾದ ಹೇಳಿದ್ದರು. ಇಷ್ಟೆಲ್ಲಾ ರಾದ್ಧಾಂತದ ಬಳಿಕ ಮನನೊಂದ ಮಹಿಳೆ ದುಡುಕಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸೊರಬ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕಲಿಲ್ಲ. ವಿರೇಂದ್ರನ ಹುಚ್ಚಾಟಕ್ಕೆ ಅಮಾಯಕ ಗೃಹಿಣಿ ಬಲಿಯಾಗಿದ್ದು ಮಾತ್ರ ವಿಪರ್ಯಾಸ.
ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ
ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ