ಕಲಬುರಗಿ: ಕರೋನಾ ವೈರಸ್ ಸೋಂಕಿನ ಕಾರಣಕ್ಕೆ ಕಲಬುರಗಿಯ 76 ವರ್ಷದ ವೃದ್ಧ ನಿಧನರಾಗಿರುವುದು ದೃಢಪಟ್ಟ ಕಾರಣ ಜಿಲ್ಲಾಧಿಕಾರಿ ಶರತ್ ಬಿ ಇಲ್ಲಿನ ವಾರ್ತಾ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.
ವಯೋವೃದ್ಧರ ನಿಧನ ಕರೋನಾ ವೈರಸ್ ಸೋಂಕಿನಿಂದಲೇ ಎಂಬುದು ದೃಢಪಟ್ಟ ಕಾರಣ, ಜಿಲ್ಲೆಯಾದ್ಯಂತ ರೋಗ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿಯ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಿದ್ದು 31 ಜನರನ್ನು ಹೈ ರಿಸ್ಕ್ ಮತ್ತು 15 ಜನರನ್ನು ಲೋ ರಿಸ್ಕ್ ಎಂದು ಪರಿಗಣಿಸಿ ಇ.ಎಸ್.ಐ.ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದರು.
ಇ.ಎಸ್.ಯ.ಸಿ.ಆಸ್ಪತ್ರೆಯಲ್ಲಿ ಇದಕ್ಕಾಗಿ 200 ಬೆಡ್ ಕ್ವಾರಂಟಯನ್ ವಾರ್ಡ್, 50 ಬೆಡ್ ಐಸೋಲೇಷನ್ ವಾರ್ಡ್ ಸ್ಥಾಪಿಸಿ ವೈದ್ಯ ಸಿಬ್ಬಂದಿಯನ್ನು ನಿಯೋಜಿಸಿದೆ. ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ತಪಾಸಣಾ ಕೇಂದ್ರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೆ ಎಲ್ಲ ತಾಲೂಕು ಹಂತದಲ್ಲಿಯೂ ಐಸೋಲೇಷನ್ ವಾರ್ಡ್ ಸ್ಥಾಪಿಸಿದೆ. ಕಲಬುರಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೆಕ್ ಪೋಸ್ಡ್ ನಿರ್ಮಿಸಲಾಗುತ್ತದೆ. ಒಂದು ವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮದುವೆ ಇನ್ನಿತರ ಕಾರ್ಯಕ್ರಮದ ಸರಳವಾಗಿರಲಿ ಎಂದು ಜನತೆಗೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ಘಟಿಕೋತ್ಸವ ಮುಂದೂಡಿಕೆ: ಕೊರೊನಾ ಸೋಂಕಿನ ಭೀತಿಯಿಂದಾಗಿ ಇದೇ 20ರಂದು ನಡೆಯಬೇಕಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಮುಂದೂಡಲಾಗಿದೆ. ಅಲ್ಲದೇ, ವಿ.ವಿ.ಯಿಂದ ಆಯೋಜಿಸಬೇಕಿದ್ದ ವಿವಿಧ ವಿಚಾರ ಸಂಕಿರಣಗಳು ಹಾಗೂ ಇದೇ 16ರಿಂದ ನಡೆಯಲಿದ್ದ ಎನ್ ಎಸ್ ಎಸ್ ವಿಶೇಷ ಶಿಬಿರವನ್ನು ರದ್ದುಗೊಳಿಸಲಾಗಿದೆ. ಇದೇ 14ರಂದು ನಡೆಯಬೇಕಿದ್ದ ಕರ್ನಾಟಕ ಕೇಂದ್ರೀಯ ವಿ.ವಿ.ಯ ಘಟಿಕೋತ್ಸವವನ್ನೂ ಈಗಾಗಲೇ ಮುಂದೂಡಲಾಗಿದೆ.