ಅಂಕೋಲಾ: ಶಿಸ್ತು, ಸಂಘಟನೆ ಮತ್ತು ಸಹಭಾಗಿತ್ವದ ಮೂಲಕ ಧರ್ಮಸ್ಥಳ ಯೋಜನೆ ಅನೇಕ ಮಹಿಳೆಯರ ಆರ್ಥಿಕ ವಿಕಾಸಕ್ಕೆ ದಾರಿ ಮಾಡಿಕೊಟ್ಟಿದೆ. ಜತೆಗೆ ಇಡೀ ಸಮುದಾಯದ ವಿಕಾಸಕ್ಕೂ ಕೈ ಜೋಡಿಸಿದೆ. ಇಂತಹ ಯೋಜನೆಯ ಲಾಭ ಪಡೆದು ಬದುಕು ಹಸನಾಗಿಸಿಕೊಳ್ಳಬೇಕು. ಪಡೆದ ಸಾಲದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
ಪಟ್ಟಣದ ಹೊನ್ನಾರಕಾ ಸಭಾವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಕೋಲಾದಲ್ಲಿ ಯೋಜನಾ ಕಚೇರಿಯ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ ಎಸ್.ಎಸ್. ಮಾತನಾಡಿ, ಕಚೇರಿಯ ವಿಕೇಂದ್ರೀಕರಣದಿಂದ ಜನಕ್ಕೆ ಇನ್ನೂ ಹೆಚ್ಚಿನ ಸೇವೆ ನೀಡಲು ಸಾಧ್ಯವಿದೆ. ಹೀಗಾಗಿ ಇಲ್ಲಿ ಕಚೇರಿ ಆರಂಭವಾಗಿದೆ. ಬಡವರ, ಅಸಹಾಯಕರ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತು 40 ವರ್ಷಗಳ ಹಿಂದೆ ಡಾ. ಹೆಗ್ಗಡೆ ಅವರು ಈ ಯೋಜನೆ ಆರಂಭಿಸಿದ್ದರು. ಈ ಯೋಜನೆ ಇಂದು ಪ್ರತಿ ಬಡವರ ಮನೆ ತಲುಪಿದೆ ಎಂದರು. ಜಿಪಂ ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಪಿ.ಯು. ಪರಿ, ಜಿಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಪಪಂ ಮಾಜಿ ಅಧ್ಯಕ್ಷ ಭಾಸ್ಕರ ಕೆ. ನಾರ್ವೆಕರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ ನಾಯ್ಕ ಅವರ್ಸಾ, ಸದಸ್ಯ ವಾಸುದೇವ ಗುನಗಾ, ನ್ಯಾಯವಾದಿ ಉಮೇಶ ನಾಯ್ಕ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ,ಪುಷ್ಪಲತಾ ನಾಯಕ, ಇತರರು ಪಾಲ್ಗೊಂಡಿದ್ದರು.
ಮೇಘನಾ ಸಂಗಡಿಗರು ಪ್ರಾರ್ಥಿಸಿದರು. ಯೋಜನಾಧಿಕಾರಿ ಮಮತಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಯೋಜನಾಧಿಕಾರಿ ವಿನಾಯಕ ಹಾಗೂ ಮೇಲ್ವಿಚಾರಕ ನಾಗರಾಜ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾಸಾಶನ ಪತ್ರ, ಜ್ಞಾನ ವಿಕಾಸ ಯೋಜನೆಯಡಿ ಗ್ರಾಮೀಣ ಶಿಕ್ಷಕರ ನೇಮಕ ಪತ್ರ, 2001ನೇ ಸಂಘದ ನೋಂದಣಿ ಪತ್ರ ಹೀಗೆ ವಿವಿಧ ಯೋಜನೆಗಳ ಪತ್ರ ವಿತರಿಸಲಾಯಿತು.