ಶ್ರೀನಗರ: ರಿಯಾಸಿ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ (ಜೂನ್ 30) ದಾಳಿ ನಡೆಸಿದೆ. ಶೋಧನೆಯಲ್ಲಿ ಭಯೋತ್ಪಾದಕರು ಮತ್ತು ಭೂಗತ ವ್ಯಕ್ತಿಗಳ (ಒಜಿಡಬ್ಲ್ಯು) ನಡುವಿನ ಸಂಪರ್ಕವನ್ನು ಸೂಚಿಸುವ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಹೇಳಿದೆ.
ಇದನ್ನು ಓದಿ: ಕೇದಾರನಾಥದ ಗಾಂಧಿ ಸರೋವರದಲ್ಲಿ ಹಿಮಕುಸಿತ; ತಪ್ಪಿದ ಭಾರೀ ಅನಾಹುತ
ಗೃಹ ಸಚಿವಾಲಯದ ಆದೇಶದ ಮೇರೆಗೆ ಎನ್ಐಎ ಬಸ್ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯನ್ನು ಜೂನ್ 15ರಂದು ವಹಿಸಿಕೊಂಡಿತ್ತು. ಭಯೋತ್ಪಾದಕರ ಸಂಚು ಬಯಲಿಗೆಳೆಯಲು ಎನ್ಐಎ ವಶಪಡಿಸಿಕೊಂಡ ವಸ್ತುಗಳ ತನಿಖೆ ಆರಂಭಿಸಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಮೇಲೆ 2024 ಜೂನ್ 9ರಂದು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಆ ವೇಳೆ ಚಾಲಕನಿಗೆ ಗುಂಡಿನ ಗಾಯವಾಗಿ ನಿಯಂತ್ರಣ ತಪ್ಪಿ ಬಸ್ ಹತ್ತಿರದ ಕಂದಕಕ್ಕೆ ಬಿದ್ದಿತು. ಈ ಭಯೋತ್ಪಾದಕರ ದಾಳಿಯಲ್ಲಿ ಒಂದು ಮಗು ಸೇರಿದಂತೆ ಒಂಬತ್ತು ಜನರು ಮೃತಪಟ್ಟರು.
ತನಿಖೆಯಲ್ಲಿ ಬಂಧಿತನಾಗಿರುವ ಆರೋಪಿ ಹಕಂ ಖಾನ್ ಅಲಿಯಾಸ್ ಹಕೀನ್ ದೀನ್ ಹೇಳಿರುವ ಸ್ಥಳಗಳಲ್ಲಿ ತನಿಖಾ ಸಂಸ್ಥೆಯ ತಂಡ ಹುಡುಕಾಟ ನಡೆಸಿತ್ತು. ಎನ್ಐಎ ತನಿಖೆಯ ಪ್ರಕಾರ ಹಕೀನ್ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸಿದ್ದ ಎನ್ನಲಾಗಿದೆ.
ಆರೋಪಿ ಹಕೀನ್ ದೀನ್ ಉಗ್ರರಿಗೆ ಆಶ್ರಯ ನೀಡಿದಲ್ಲದೆ, ಅವರ ಚಟುವಟಿಕೆಗಳು ಮತ್ತು ಕೆಲಸಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದಾನೆ, ಇದರಿಂದಾಗಿ ಈ ಘಟನೆ ನಡೆದಿದೆ. ವಿಚಾರಣೆ ವೇಳೆ ಹಕೀನ್ ದೀನ್ ಮನೆಯಲ್ಲಿ ಮೂವರು ಉಗ್ರರು ತಂಗಿರುವುದು ಬೆಳಕಿಗೆ ಬಂದಿದೆ. ಉಗ್ರರು ಆರೋಪಿಗೆ ಹಣವನ್ನೂ ನೀಡಿದ್ದಾರೆ ಎಂದು ರಿಯಾಸಿ ಎಸ್ಪಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಜೂನ್ನಲ್ಲಿ ಸರಣಿ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದ್ದು, ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಲೋಕಿಸಿದರು. ಇತ್ತೀಚಿನ ಭಯೋತ್ಪಾದನಾ ದಾಳಿಗಳ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತಿಸುತ್ತಿದೆ. ದೇಶದ ಶತ್ರುಗಳಿಗೆ ಪಾಠ ಕಲಿಸುವ ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. (ಏಜೆನ್ಸೀಸ್)
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ; ಸಂಸದ ಸಂಜಯ್ ಸಿಂಗ್