ಹೂವಿನಹಡಗಲಿ: ಹೊಳಲು ಗ್ರಾಮದ ಹೊರವಲಯದಲ್ಲಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಸ್ಮಶಾನಕ್ಕೆ ತೆರಳಲು ಹದಿನೈದು ದಿನದೊಳಗೆ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಗ್ರಾಮದ ರೈತ ಚಂದ್ರಪ್ಪ ಕೋಡಬಾಳ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ನಿರ್ಮಾಣವಾದ ಕಸ ವಿಲೇವಾರಿ ಘಟಕಕ್ಕೆ ತೆರಳಲು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಸಿಎಂ ಕಚೇರಿಗೂ ಪತ್ರ ಬರೆಯಲಾಗಿತ್ತು. ರಸ್ತೆ ನಿರ್ಮಾಣ ಮಾಡುವಂತೆ ಸಿಎಂ ಕಚೇರಿಯಿಂದ ಸೂಚನೆ ಬಂದರೂ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆ.
ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಕಸ ಬಿಸಾಡಲಾಗುತ್ತಿದೆ. ಹದಿನೈದು ದಿನದೊಳಗಾಗಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸದಿದ್ದರೆ ಸಿಎಂ ಮನೆಮುಂದೆ ಕುಳಿತು ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು. ಗ್ರಾಮಸ್ಥರಾದ ಟಿ.ಚಂದ್ರಪ್ಪ, ಮಲ್ಲಪ್ಪ ಹೊಟ್ಟಿಗೌಡ್ರು, ಕೆ.ರಾಜಪ್ಪ, ಕೋಡಬಾಳ ವಿರೂಪಾಕ್ಷಪ್ಪ, ಕಾಟನಹಳ್ಳಿ ಹಾಲಪ್ಪ, ಅಕ್ಬರ್ ಸಾಬ್, ಸುಕುರ್ ಸಾಬ್ ಇತರರಿದ್ದರು.
![](https://cdn.vvimgs.com/wp-content/uploads/2024/07/Shweta-Dental-Hospital-Digital-Ad.jpg)