ಗುಯಾನ: ನಿನ್ನೆ (ಜೂ.28) ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ 68 ರನ್ಗಳ ಅಂತರದಲ್ಲಿ ಭರ್ಜರಿ ಇಂಗ್ಲೆಂಡ್ ವಿರುದ್ಧ ರೋಹಿತ್ ಪಡೆ ಗೆದ್ದು ಬೀಗಿತು. ಸತತ ಗೆಲುವುಗಳ ಮೂಲಕ ಇದೀಗ ಫೈನಲ್ಗೆ ಪ್ರವೇಶಿಸಿರುವ ಭಾರತ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ಹಾವೇರಿ ಭೀಕರ ಅಪಘಾತ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ, ಸಂತಾಪ ಸೂಚಿಸಿದ ಗಣ್ಯರು
ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಭಾರತಕ್ಕೆ ಬ್ಯಾಟ್ ಮಾಡುವಂತೆ ಹೇಳಿತು. ಅದರಂತೆಯೇ ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮ ಅವರ ಆಕರ್ಷಕ ಅರ್ಧಶತಕ (57) ಮತ್ತು ಸೂರ್ಯಕುಮಾರ್ ಯಾದವ್ (47) ರನ್ಗಳ ಕೊಡುಗೆ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಅತೀ ಮುಖ್ಯವಾಗಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಕಾಡಿದ ಟೀಮ್ ಇಂಡಿಯಾ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್, ತಲಾ 3 ವಿಕೆಟ್ ಪಡೆದು ಗೆಲುವನ್ನು ಸಂಭ್ರಮಿಸಿದರು.
ಇನ್ನು ಭಾರತ ಸೆಮಿಫೈನಲ್ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಭಾವುಕರಾದ ಕ್ಯಾಪ್ಟನ್ ರೋಹಿತ್ ಶರ್ಮ, ಕ್ಯಾಮರಾ ಮುಂದೆಯೇ ಕಣ್ಣೀರಿಟ್ಟರು. ಇದನ್ನು ನೋಡಿದ ವಿರಾಟ್ ಕೊಹ್ಲಿ, ರೋಹಿತ್ ಬೆನ್ನುತಟ್ಟಿ, ಅಪ್ಪಿಕೊಂಡರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಯಿತು. ಸದ್ಯ ಟೀಮ್ ಇಂಡಿಯಾದ ಗೆಲುವನ್ನು ಸಂಭ್ರಮಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಪೈಕಿ, ಭಾರತದ ಮಾಜಿ ಆಟಗಾರ ನವಜೋತ್ ಸಿಂಗು ಸಿಧು ತಂಡಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಬದಲಾವಣೆ ಮಾಡುವುದಾದರೆ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
“ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದು ಈಗ ಫೈನಲ್ ಪ್ರವೇಶಿಸಿರುವ ಟೀಮ್ ಇಂಡಿಯಾಗೆ ನನ್ನ ಅಭಿನಂದನೆಗಳು. ಫೈನಲ್ ಮ್ಯಾಚ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವಕಪ್ ಟ್ರೋಫಿ ಗೆದ್ದು ಬನ್ನಿ. ಅದರಲ್ಲೂ ಅಂತಿಮ ಹಣಾಹಣಿಯಲ್ಲಿ ನಿಮ್ಮ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೋಸ್ಕರ ಆದರೂ ನೀವು ವಿಶ್ವಕಪ್ ಫೈನಲ್ನಲ್ಲಿ ಗೆಲ್ಲಬೇಕು. ಇದನ್ನು ಮಾಡಿದ್ರೆ, ಕೋಚ್ ಸ್ಥಾನದಿಂದ ನಿವೃತ್ತಿ ಹೊಂದುವ ರಾಹುಲ್ಗೆ ಅತ್ಯುತ್ತಮ ಗೌರವ ಸಲ್ಲಿಸಿದಂತಾಗುತ್ತದೆ” ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ,(ಏಜೆನ್ಸೀಸ್).
6 ತಿಂಗಳಿಂದ ಪ್ರೇಕ್ಷಕರ ಕಾಣದ ಚಿತ್ರಮಂದಿರ ಈಗ ಹೌಸ್ಫುಲ್! ಇದು ಪ್ರಭಾಸ್ ‘ಕಲ್ಕಿ’ ಪ್ರಭಾವ