ಲಖನೌ: ತಾನು ಹೆತ್ತ ಮಕ್ಕಳು ಹಸಿವಿನಿಂದ ಅಳುತ್ತಿರುವುದನ್ನು ನೋಡಲಾರದೆ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ಔರೈಯಾದಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮೃತಪಟ್ಟಿದ್ದು, ಓರ್ವ ಮಗು ಬದುಕುಳಿದಿದೆ. ಇನ್ನೊಂದು ಮಗುವಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಪೊಲೀಸರು ಮಕ್ಕಳ ತಾಯಿ ಪ್ರಿಯಾಂಕಾಳನ್ನು ಬಂಧಿಸಿದ್ದು, ಆಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ನನ್ನ ಪತಿಯ ನಿಧನದ ನಂತರ ಮಕ್ಕಳಿಗೆ ಸರಿಯಾಗಿ ಊಟ ಹಾಕಲು ಸಾಧ್ಯವಾಗಲಿಲ್ಲ. ಅವರು ಹಸಿವಿನಿಂದ ಅಳುವುದನ್ನು ನೋಡಲಾರದೆ ಈ ರೀತಿ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ರಿಯಲ್ ಆಗಿ ಒದೆ ತಿಂದ ಯುವಕರು; ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋವನ್ನು ನೀವು ನೋಡಿ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಒಂದೂವರೆ ವರ್ಷದ ಹಿಂದೆ ಪ್ರಿಯಾಂಕಾಳ ಪತಿ ಮೃತಪಟ್ಟಿದ್ದು ಆಕೆ ತನ್ನ ಸೋದರ ಮಾವನೊಂದಿಗೆ ವಾಸಿಸುತ್ತಿದ್ದಳು. ಗುರುವಾರ ಮುಂಜಾನೆ ಮಕ್ಕಳು ಹಸಿವಿನಿಂದ ಅಳುತ್ತಿರುವುದನ್ನು ನೋಡಿದ ಪ್ರಿಯಾಂಕಾ ಕೇಶಂಪುರ ಘಾಟ್ಗೆ ಬಳಿ ಇರುವ ಬಾಂಬಾ ನದಿಯಲ್ಲಿ ಮುಳುಗಿಸಿದ್ದಾಳೆ. ನಾಲ್ವರ ಪೈಕಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಒಂದು ಮಗು ಬದುಕುಳಿದಿದೆ. ಇನ್ನೋರ್ವ ಮಗುವಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಶೀಘ್ರದಲ್ಲೇ ಹುಡುಕಲಾಗುವುದು.
ವಿಚಾರಣೆ ವೇಳೆ ಆರೋಪಿಯು ತಪ್ಪೊಪ್ಪಿಕೊಂಡಿದ್ದು, ತನ್ನ ಮಕ್ಕಳು ಹಸಿವಿನಿಂದ ಅಳುವುದನ್ನು ನೋಡಲಾರದೆ ಈ ರೀತಿ ಮಾಡಿದ್ದಾಗಿ ಹೇಳಿದ್ದಾಳೆ. ತನಿಖೆ ಮುಂದುವರೆದಿದ್ದು, ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.