ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬೌದ್ಧಿಕ ಆಸ್ತಿ ಹಕ್ಕು ರಾಷ್ಟ್ರೀಯ ಕಾರ್ಯಾಗಾರದಲ್ಲಿ (ಐಪಿ ಯಾತ್ರಾ) ಸಣ್ಣ ಹಾಗೂ ಮಧ್ಯಮ ಉದ್ಯಮಗಳು, ಸಂಶೋಧಕರು ಸೇರಿ ಇನ್ನೂರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಯಿತು.
ಸರ್ಕಾರಿ ಅಧಿಕಾರಿಗಳು, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂ, ಜಿಲ್ಲೆಯ ವಾಣಿಜ್ಯೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಸಮಗ್ರ ಮಾಹಿತಿ ಪಡೆದರು.
ಕಾರ್ಯಾಗಾರದಲ್ಲಿ ಸರ್ಕಾರಿ ಯೋಜನೆಗಳ ಮಾಹಿತಿ, ಸಂಶೋಧನೆಗಳ ಮಹತ್ವ, ಆವಿಷ್ಕಾರಗಳ ಸಂರಕ್ಷಣೆಗೆ ಮಾರ್ಗದರ್ಶನ ನೀಡಲಾಯಿತು. ಗಣ್ಯರು, ತಜ್ಞರು ಪರಸ್ಪರ ಚರ್ಚೆ ಜತೆಗೆ ಮಾಹಿತಿ ಹಂಚಿಕೊಂಡರು.
“ಐಪಿ ಯಾತ್ರಾ’ದಿಂದ ಬೌದ್ಧಿಕ ಆಸ್ತಿ ಸಂರಕ್ಷಣೆ, ಪೇಟೆಂಟ್ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಗಮನ ಹರಿಸಲು ಭಾಗಿದಾರರಿಗೆ ಅನುಕೂಲವಾಯಿತು. ಪ್ರಾಯೋಗಿಕ ಜ್ಞಾನ ಬೆಳೆಯಿತು.
ಕರ್ನಾಟಕ ಕನ್ವೇಯರ್ಸ್ ಸಿಸ್ಟ್ಂ ಎಂಡಿ ಎಂ.ವಿ. ಕರಮರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎನ್ಕೆಎಸ್ಎಸ್ಐ ಅಧ್ಯಕ್ಷ ಗಿರೀಶ ನಲವಡಿ, ಎಂಎಸ್ಎಂಇ ಸಹಾಯಕ ನಿರ್ದೇಶಕ ಬಿ.ಎಸ್. ಜವಳಗಿ, ಬೆಂಗಳೂರಿನ ಇಂಡೋವೇಶನ್ ಮ್ಯಾನೇಜರ್ ಸ್ಯಾಮ್ ಜೈಕುಮಾರ ಅತಿಥಿಗಳಾಗಿದ್ದರು.
ಕೆಎಲ್ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಿ.ಎಸ್. ಅನಾಮಿ, ಶಿವಯೋಗಿ ತುರಮರಿ, ಹರೀಶ ಅಗಡಿ, ಶಿವರಾಜ ಹುಬಳಿಕರ, ಇತರರು ಇದ್ದರು.