ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ, ಮಾಜಿ ಎಂಎಲ್ಸಿ ಎಂ.ಬಿ.ಭಾನುಪ್ರಕಾಶ ಅಗಲಿಕೆ ಕಾರ್ಯಕರ್ತರಿಗೆ ದಿಗ್ಭ್ರಮೆ ಉಂಟುಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮತ್ತೂರಿನ ಭಾನುಪ್ರಕಾಶ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಾನುಪ್ರಕಾಶ ಅವರ ಇಡೀ ಕುಟುಂಬ ಸಂಘಕ್ಕಾಗಿ ದುಡಿದಿದೆ. ಯಾರಿಗೂ ನೋಯಿಸದೆ ಪರಿಶುದ್ಧ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಅವರ ಅಕಾಲಿಕ ನಿಧನ ಸಂಘಟನೆಗೆ ತುಂಬಲಾರದ ನಷ್ಟ. ಅವರ ಪ್ರೇರಣೆ ನಮ್ಮ ಜತೆಗೆ ಇರಲಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಲ್ಲಿಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗಿಲ್ಲ. ಭಾನುಪ್ರಕಾಶ ಅವರ ನುಡಿಮುತ್ತುಗಳು ಎಂದಿಗೂ ನಮ್ಮ ಜತೆಗಿರುತ್ತವೆ. ಕುಟುಂಬಕ್ಕೆ ದೇವರು ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ಮುಖಂಡರಾದ ಸಿ.ಎಚ್.ಮಾಲತೇಶ್, ವಿನ್ಸಂಟ್ ರೋಡ್ರಿಗಸ್ ಇತರರಿದ್ದರು.