ವಿಜಯವಾಣಿ ಸುದ್ದಿಜಾಲ ಕೋಟ
ಸಾಸ್ತಾನದ ಟೋಲ್ನಲ್ಲಿ ಫಾಸ್ಟ್ಟ್ಯಾಗ್ ನೆಪದಲ್ಲಿ ಸ್ಥಳೀಯ ಜಿಪಂ ವ್ಯಾಪ್ತಿಯ ವಾಹನಗಳಿಗೆ ಟೋಲ್ ಬರೆ ಮುಂದುವರೆದಿದೆ. ಇತ್ತೀಚಿನ ಕೆಲ ತಿಂಗಳಿಂದ ಕೋಟ ಜಿಪಂ ವ್ಯಾಪ್ತಿಯ ವಾಹನಗಳ ಟೋಲ್ ವಸೂಲಾತಿ, ಟೋಲ್ ಉಸ್ತುವಾರಿ ಕಂಪನಿಯಿಂದಾಗುತ್ತಿದ್ದು, ವಾಹನ ಸವಾರರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಬಗ್ಗೆ ಹೆದ್ದಾರಿ ಜಾಗೃತಿ ಸಮಿತಿ ಇತ್ತೀಚೆಗೆ ಟೋಲ್ ಪ್ಲಾಜಾಗೆ ತೆರಳಿ ಸ್ಥಳೀಯರಿಂದ ವಸೂಲಿ ಮಾಡದಂತೆ ತಾಕೀತು ಮಾಡಿದ್ದು ಅದರಂತೆ ಒಂದೆರಡು ದಿನ ಟೋಲ್ನಿಂದ ಸ್ಥಳೀಯ ಯಾವುದೇ ವಾಹನಗಳ ಟೋಲ್ ಹಣ ವಸೂಲಿ ನಡೆದಿರಲಿಲ್ಲ, ಆದರೆ ಒಂದು ವಾರದಿಂದ ಮತ್ತೆ ಟೋಲ್ ವಸೂಲಾತಿ ನಡೆಯುತ್ತಿದ್ದು, ವಾಹನ ಟೋಲ್ಗೇಟ್ ಪಾಸಾದರೂ ಹಣ ಫಾಸ್ಟ್ ಟ್ಯಾಗ್ ಜೀರೊ ಬ್ಯಾಲೆನ್ಸ್ ತೋರಿಸುತ್ತಿತ್ತು. ಆದರೆ ಮರುದಿನ ಟೋಲ್ ಹಣ ಕಟ್ ಆದ ಮೆಸೇಜ್ ಮೊಬೈಲ್ ಮೂಲಕ ತಿಳಿದ ಸ್ಥಳೀಯ ವಾಹನ ಮಾಲೀಕರು ಹೆದ್ದಾರಿ ಸಮಿತಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಹೆದ್ದಾರಿ ಜಾಗೃತಿ ಸಮಿತಿ ಸಭೆ
ಟೋಲ್ ವಸೂಲಾತಿ ವಿರುದ್ಧ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರ ದಿಢೀರ್ ಸಭೆ ಬುಧವಾರ ಸಾಸ್ತಾನದಲ್ಲಿ ಏರ್ಪಡಿಸಿದ್ದು, ಪದೇ ಪದೆ ಸಮಸ್ಯೆ ಸೃಷ್ಟಿಸುತ್ತಿರುವ ಹೆದ್ದಾರಿ ಟೋಲ್ ವಸೂಲಾತಿ ಕಂಪನಿ ಕಳ್ಳಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ. ಸ್ಥಳೀಯ ವಾಹನಗಳಿಗೆ ವಿನಾಯಿತಿ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವ ಪ್ರಸ್ತುತ ಕಂಪನಿ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ಅನಿವಾರ್ಯವಾಗಿದೆ. ಮೇ 18ರಂದು ಸಂಜೆ 5ಕ್ಕೆ ಸಾಸ್ತಾನದ ಶಿವಕೃಪಾ ಸಭಾಂಗಣದಲ್ಲಿ ಪುನಃ ಸ್ಥಳೀಯ ಜಿಪಂ ವ್ಯಾಪ್ತಿಯ ವಾಹನಗಳ ಮಾಲೀಕರ, ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ ಘೋಷಿಸಿದರು. ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಭೆ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಆಂದ್ರಾದೆ, ಮಾಜಿ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ, ಸಾಲಿಗ್ರಾಮ ಪಪಂ ಸದಸ್ಯ ಸಂಜೀವ ದೇವಾಡಿಗ, ಮಹಾಬಲ ಪೂಜಾರಿ, ಗಣೇಶ್ ಪೂಜಾರಿ, ಹರೀಷ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.