ಕೊಚ್ಚಿ: ಪ್ರೊಪೆಸರ್ ಮೇಲೆ ದಾಳಿ ನಡೆಸಿ ಬಲಗೈಯನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ದೋಷಿಗಳೆಂದು, ಇತರ ಐವರನ್ನು ದೋಷಮುಕ್ತರೆಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯವು ಘೋಷಿಸಿದೆ.
ನಿಷೇಧಿತ ಸಂಘಟನೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಸದಸ್ಯರಾದ ಎಂ.ಕೆ.ನಾಸರ್, ಸಜಿಲ್, ನಜೀಬ್, ಎಂ.ಕೆ.ನೌಶಾದ್, ಪಿ.ಪಿ.ಮುಹಮ್ಮದ್ಮುಂಜು ಮತ್ತು ಪಿ.ಎಂ.ಅಯೂಬ್ರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಶಫೀಕ್, ಅಜೀಜ್ ಓಡಕ್ಕಲಿ, ಮೊಹಮ್ಮದ್ ರಫಿ, ಟಿ.ಪಿ.ಸುಬೈರ್ ಮತ್ತು ಮನ್ಸೂರ್ರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಇದನ್ನೂ ಓದಿ: ಹಾಸ್ಟೆಲ್ ಮೇಲ್ವಿಚಾರಣೆ ವೇಳೆ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ, ಅಧಿಕಾರಿಯ ಬಂಧನ
ಪ್ರಶ್ನೆ ಪತ್ರಿಕೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ 2010ರ ಜುಲೈ 4ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಅಧ್ಯಾಪಕರಾಗಿದ್ದ ಟಿಟಿ ಜೋಸೆಫ್ ಎಂಬುವರ ಮೇಲೆ ದಾಳಿ ನಡೆದಿತ್ತು. ಏಕಾಏಕಿ ದಾಳಿ ನಡೆಸಿದ ದಾಳಿಕೋರರ ಗುಂಪು ಪ್ರೊಫೆಸರ್ರನ್ನು ವಾಹನದಿಂದ ಹೊರಗೆಳೆದು, ಮನೆಯವರ ಸಮ್ಮುಖದಲ್ಲೇ ಹಲ್ಲೆ ನಡೆಸಿ ಅವರ ಬಲಗೈಯನ್ನು ಕತ್ತರಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸವಾದ್ ಎಂಬಾತ ಎಸಗಿದ್ದು, ಆತ ಇನ್ನೂ ತಲೆಮರೆಸಿಕೊಂಡಿದ್ದಾರೆ.
ಈ ಪ್ರಕರಣವು ಮಲಯಾಳಂ ಪ್ರೊಫೆಸರ್ ಟಿಜೆ ಜೋಸೆಫ್ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಕ್ರೂರ ದಾಳಿಗೆ ಸಂಬಂಧಿಸಿದ್ದು, ಈ ಕುರಿತು ಮಾತನಾಡಿದ ಜೋಸೆಫ್, ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ. ಈ ಕ್ಷಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸದಿರುವುದು ಸೂಕ್ತ. ಪಿಎಫ್ಐ ದಾಳಿಯಲ್ಲಿ ಅನೇಕರು ಬಲಿಪಶುಗಳಾಗಿದ್ದು, ಅನೇಕರು ಈಗ ಜೀವಂತವಾಗಿಲ್ಲ. ಅವರಿಗಾಗಿ ತಾವು ಮೌನ ಆಚರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾಮಿ ವಿವೇಕಾನಂದರ ಪ್ರೇರಣೆ: ವಿದೇಶಿಗರಿಂದ ಅಮರನಾಥ ಯಾತ್ರೆ
ಈ ಪ್ರಕರಣದ ವಿಚಾರಣೆಯನ್ನು ಎರಡು ಹಂತಗಳಲ್ಲಿ ನಡೆಸಲಾಯಿತು. ಈ ಹಿಂದೆ ಮೊದಲ ಹಂತದಲ್ಲಿ ವಿಚಾರಣೆಗೆ ಒಳಗಾದ 13 ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, 18 ಮಂದಿಯನ್ನು ಸಾಕ್ಷಾಧಾರದ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಸದ್ಯ ಅಪರಾಧಿ ಎನಸಿಕೊಂಡಿರುವ ಈ 6 ಮಂದಿಯ ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ.(ಏಜೆನ್ಸೀಸ್)