More

    ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ರೂ.: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು 1 ಲಕ್ಷ ರೂ. ನೀಡಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 1 ಲಕ್ಷ ರೂ.ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

    ಇದನ್ನೂ ಓದಿ: ಕ್ಯಾನ್ಸರ್‌ನಿಂದ ಪತ್ನಿ ಸಾವಿಗೀಡಾದ ಕೆಲವೇ ನಿಮಿಷಗಳಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಆತ್ಮಹತ್ಯೆ

    ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಕೆಂಪೇಗೌಡರ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಸಾವಿರ, ತಾಲ್ಲೂಕು ಕೇಂದ್ರಗಳಿಗೆ 20 ಸಾವಿರದ ಜೊತೆಗೆ ಹೆಚ್ಚುವರಿಯಾಗಿ 1 ಲಕ್ಷ ರೂ. ನೀಡಲಾಗುವುದು. ಜಿಲ್ಲಾ ಕೇಂದ್ರಗಳಿಗೆ 50 ಸಾವಿರ ನೀಡಲಾಗುತ್ತಿದ್ದು ಹೆಚ್ಚು ಮಾಡಲು ಚಿಂತನೆ ನಡೆಸಲಾಗುವುದು. ನಾಡಪ್ರಭು ಕೆಂಪೇಗೌಡರ 515 ನೇ ಜಯಂತೋತ್ಸವವನ್ನು ಅರಮನೆ ಮೈದಾನ ಅಥವಾ ಹೊರಾಂಗಣ ಮೈದಾನದಲ್ಲಿ ಜೂನ್ 27 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದರು.

    ಹುಲಿಯೂರುದುರ್ಗ, ಮಾಗಡಿ, ಆವತಿ ಸೇರಿದಂತೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಂದ ಪ್ರತಿವರ್ಷದಂತೆ ಗೋಪುರ ಮತ್ತು ಜ್ಯೋತಿಗಳ ಮೆರವಣಿಗೆ ಬರುತ್ತದೆ. ಕೆಂಪೇಗೌಡರು ನಿರ್ಮಾಣ ಮಾಡಿದ್ದ ಗೋಪುರಗಳನ್ನು ದಾಟಿ ಬೆಂಗಳೂರು ಮೂರು, ನಾಲ್ಕು ಪಟ್ಟು ಹೆಚ್ಚು ಬೆಳೆದಿದೆ. ಬೆಂಗಳೂರು ಇಷ್ಟು ಅಗಾಧವಾಗಿ ಬೆಳೆಯಬಹುದು ಎನ್ನುವ ಕಲ್ಪನೆ ಸ್ವತಃ ಕೆಂಪೇಗೌಡರಿಗೆ ಇರಲಿಲ್ಲ. ಈ ನಗರ ಸ್ಥಾಪಿಸಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಇತರೇ ಸಾಧಕರ ಜಯಂತಿಯಂತೆ ಆಚರಿಸಬೇಕಿದೆ ಎಂದು ಹೇಳಿದರು.

    ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ: ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚನೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಡಿಎ, ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲು ಯೋಜಿಸಲಾಗಿದೆ. ಪ್ರಶಸ್ತಿಗೆ ನಾನು ಒಂದಷ್ಟು ಹೆಸರು ಸೂಚಿಸಿದ್ದೆ. ವಾರ್ಡ್ ಮಟ್ಟದಲ್ಲಿ ಅಥವಾ ಬೇರೆ ಸ್ವರೂಪದಲ್ಲಿ ಪ್ರಶಸ್ತಿ ನೀಡಬೇಕಾ ಎಂದು ಗೊಂದಲ ಇರುವ ಕಾರಣಕ್ಕೆ ಮುಂದುವರೆದಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಶಸ್ತಿ ನೀಡಲಾಗುವುದು.

    ಸಮಾಧಿ ಹಾಗೂ ಕೋಟೆ ಅಭಿವೃದ್ದಿಗೆ ಕ್ರಿಯಾ ಯೋಜನೆ: ಕೆಂಪೇಗೌಡರ ಮೂಲ ಸಮಾಧಿ ಸ್ಥಳ, ಕೋಟೆಯನ್ನು ಅಭಿವೃದ್ದಿಪಡಿಸುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅವರ ಬಗ್ಗೆ ಮಾಹಿತಿಯೂ ಸಿಗಬೇಕು ಹಾಗೂ ಪ್ರವಾಸಿ ಸ್ಥಳವಾಗಿಯೂ ಪರಿವರ್ತನೆಯಾಗಬೇಕು. ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಕ್ಷೇತ್ರದಲ್ಲಿ ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ದಿಗೆ 10 ಎಕರೆ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗುವುದು. ಸುಮ್ಮನಹಳ್ಳಿಯಲ್ಲಿ ಕೆಂಪೇಗೌಡ ಪ್ರಾಧಿಕಾರದ ಕಚೇರಿಗಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಜಯಂತಿಯಂದೇ ಗುದ್ದಲಿಪೂಜೆಗೆ ಯೋಚಿಸಲಾಗಿದೆ ಎಂದು ತಿಳಿಸಿದರು.

    ಜಾತ್ಯಾತೀತ ತತ್ವದಲ್ಲಿ ಆಚರಣೆ ಮಾಡಬೇಕು: ಕೆಂಪೇಗೌಡರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು. ಜಾತ್ಯಾತೀತ ತತ್ವದಲ್ಲಿ ಆಚರಣೆ ಮಾಡಬೇಕು. ಕೆಂಪೇಗೌಡರ ಜಯಂತಿ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಈ ರೀತಿ ನಮ್ಮ ಸರ್ಕಾರ ಬಿಂಬಿಸುವುದಿಲ್ಲ. ಎಲ್ಲ ವರ್ಗದ ಜನರಿಗೂ ಕೆಂಪೇಗೌಡರು ಸಹಕಾರ ನೀಡಿದ್ದಾರೆ. ಬಸವಣ್ಣ ನವರ ಜಯಂತಿಯನ್ನು ಕೇವಲ ಲಿಂಗಾಯತರು ಹಾಗೂ ಅಂಬೇಡ್ಕರ್ ಅವರ ಜಯಂತಿಯನ್ನು ಪರಿಶಿಷ್ಟರು ಮಾಡುತ್ತಿದ್ದಾರೆ. ನಾವು ಎಲ್ಲಾ ಸಂಘ ಸಂಸ್ಥೆಗಳನ್ನು, ಸಮುದಾಯಗಳನ್ನು ಸೇರಿಸಿಕೊಂಡು ಆಚರಣೆ ಮಾಡಬೇಕು. ಸಭೆಯಲ್ಲಿ 100ಕ್ಕೂ ಉತ್ತಮವಾದ ಸಲಹೆಗಳು ಬಂದಿವೆ. ಇದರಲ್ಲಿ ಸೂಕ್ತವಾದವುಗಳನ್ನು ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.

    ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಆದ್ಯತೆ: ಇತರೇ ರಾಜ್ಯಗಳ ಶೇ 60 ರಷ್ಟು ಜನರು ಬೆಂಗಳೂರಿನ ವಾತಾವರಣ, ಶಿಕ್ಷಣ ಸೇರಿದಂತೆ ಇತರೇ ಸೌಲಭ್ಯಗಳಿಗೆ ಮಾರುಹೋಗಿದ್ದಾರೆ. ದೆಹಲಿ ನಂತರ ಬೆಂಗಳೂರನ್ನು ದೇಶ- ವಿದೇಶಿಯರು ನೋಡುವಂತಾಗಿದೆ. ಸರ್ವಜನಾಂಗಕ್ಕೂ ಬೆಂಗಳೂರು ಆಪ್ತವಾಗಿದೆ. ಕೆಂಪೇಗೌಡರ ಅಭಿವೃದ್ದಿಯ ಹೆಜ್ಜೆ ನಂತರ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣವಾಯಿತು. ಇದಾದ ನಂತರ ಪ್ರವಾಸೋದ್ಯಮದಲ್ಲಿ ಸ್ವಲ್ಪ ಹಿಂದೆ ಬಿದ್ದಿದೆ. ಒಂದಷ್ಟು ಹಳೆಯ ದೇವಾಲಯಗಳು ಬಿಟ್ಟರೆ ಪ್ರೇಕ್ಷಣೀಯ ಸ್ಥಳಗಳು ಇಲ್ಲ. ಅಲ್ಲದೇ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆ ನಿವಾರಣೆಗೆ ಕಟ್ಟಡಗಳನ್ನು ಒಡೆಯಲು ಆಗುವುದಿಲ್ಲ. ಆದ ಕಾರಣ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಿದೆ ಎಂದರು.

    ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಈ ನಾಡು ಕಟ್ಟಿದಂತಹ ಕೆಂಪೇಗೌಡರನ್ನು ನಾವು ಸ್ಮರಿಸಿಕೊಳ್ಳಬೇಕು. ಹಿಂದಿನ ಸರ್ಕಾರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿತ್ತು. ಅದರ ಅಕ್ಕಪಕ್ಕ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ತರಾತುರಿಯಲ್ಲಿ ಪ್ರಧಾನಮಂತ್ರಿಗಳನ್ನು ಕರೆಸಿ ಕೆಂಪೇಗೌಡರ ಪ್ರತಿಮೆಯನ್ನು ಬಿಸಿಲಿನಲ್ಲಿ ನಿಲ್ಲಿಸಲಾಗಿದೆ. ಈ ಉಸ್ತುವಾರಿಯನ್ನು ಸಚಿವರಾದ ಮುನಿಯಪ್ಪ ಅವರು ಹಾಗೂ ಕೃಷ್ಣಬೈರೇಗೌಡರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

    ಪಣಜಿ: ಶೀಘ್ರದಲ್ಲೇ 40 ಜನ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts