ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ತನ್ನ ಸಿಎಸ್ಆರ್ ನೆರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದು, ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ ಸುಮಾರು ಒಂದು ಕೋಟಿ ರೂಪಾಯಿ ಮೊತ್ತದ ನೆರವು ನೀಡಿದೆ.
ಎಂಆರ್ಪಿಎಲ್ನ ಆರೋಗ್ಯ ಸಂರಕ್ಷಣಾ ಉಪಕ್ರಮದ ಭಾಗವಾಗಿ ಎಂಡೋಸಲ್ಫಾನ್ ಸಂತ್ರಸ್ತರ ಅನುಕೂಲಕ್ಕಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಹೊಸ ಪಾಲನಕೇಂದ್ರ (ಡೇ ಕೇರ್ ಸೆಂಟರ್) ನಿರ್ಮಾಣಕ್ಕಾಗಿ ಈ ಮೊತ್ತವನ್ನು ನೀಡಿದೆ. ಪ್ರಸ್ತುತ ಕೇಂದ್ರವು ಬಾಡಿಗೆ ಕಟ್ಟಡದಲ್ಲಿದ್ದು, ಎಂಡೋ ಪೀಡಿತರ ಆರೈಕೆಗೆಗೆ ಶಾಸ್ವತ ಕಟ್ಟಡ, ಫಿಸಿಯೋಥೆರಪಿ ಉಪಕರಣ, ವಿಶೇಷ ಚಿಕಿತ್ಸಾಲಯ ನಿರ್ಮಾಣ ಯೋಜನೆಗೆ ಬಳಕೆಯಾಗಲಿದೆ. ತಾಲೂಕಿನ ಸುಮಾರು 1573 ಎಂಡೋಸಲ್ಫಾನ್ ಪೀಡಿತರಿಗೆ ಪ್ರಯೋಜನವಾಗಲಿದೆ.
ಎಂಆರ್ಪಿಎಲ್ನ ಎಚ್ಆರ್ ವಿಭಾಗದ ಜಿಜಿಎಂ ಕೃಷ್ಣ ಹೆಗಡೆ ಎಂ., ಸಿಜಿಎಂ ಮನೋಜ್ ಕುಮಾರ್ ಎ, ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಡಿಸಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ಅವರಿಗೆ 1 ಕೋಟಿ ರೂ. ಚೆಕ್ ಅನ್ನು ಹಸ್ತಾಂತರಿಸಿದರು. ಈ ಸಂದರ್ಭ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ನವೀನ್ ಕುಲಾಲ್ ಇದ್ದರು.