ಬ್ಯಾಡಗಿ: ಅನಾರೋಗ್ಯದಿಂದ ಮೃತಪಟ್ಟ ಸಿಆರ್ಪಿಎಫ್ ಯೋಧ ಮಲ್ಲಪ್ಪ ಸಂಗಪ್ಪ ಧನ್ನೂರ ಅವರ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವದೊಂದಿಗೆ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಯಿತು.
ಮಹಾರಾಷ್ಟ್ರದ ನಾಗಪುರದ 192/ಬಟಾಲಿಯನ್ನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಇವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದರು. ಅವರ ಹುಟ್ಟೂರಾದ ಬ್ಯಾಡಗಿ ಪಟ್ಟಣಕ್ಕೆ ಮೃತದೇಹವನ್ನು ತರಲಾಗಿತ್ತು. ಸಿಪಿಐ ಭಾಗ್ಯವತಿ ಬಂತಿ ನೇತೃತ್ವದಲ್ಲಿ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಇಲ್ಲಿನ ವೀರಶೈವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಬಸವರಾಜ ಶಿವಣ್ಣನವರ, ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ, ರಾಜಣ್ಣ ಹೊಸಳ್ಳಿ, ವೀರಭದ್ರಪ್ಪ ಧನ್ನೂರು, ಎಎಸ್ಐ ಬಸವರಾಜ ಅಂಜುಟಗಿ ಇತರರಿದ್ದರು.