ಸಂತೋಷ ದೇಶಪಾಂಡೆ ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಸಾಕಾರಗೊಳಿಸಲು ಜಿಲ್ಲೆಯ ಜನ ಸಾವಿರಾರು ಎಕರೆ ಜಮೀನು, ಮನೆ, ಮಠ ಕಳೆದುಕೊಂಡರು. ನೂರಾರು ವರ್ಷಗಳಿಂದ ಇದ್ದ ಗ್ರಾಮದೊಂದಿಗೆ ಸಂಬಂಧವು ಕಳಚಿಕೊಂಡರು. ಎಲ್ಲವು ತ್ಯಾಗ ಮಾಡಿ ಪುನರ್ ವಸತಿ ಕೇಂದ್ರಕ್ಕೆ ಬಂದರು ಸಂತ್ರಸ್ತರ ಹಣೆ ಬರಹ ಮಾತ್ರ ಬದಲಾಗಿಲ್ಲ.!!
ಇದು ಅಕ್ಷರಶಃ ಸತ್ಯ. ೨೦೦೦ ಇಸ್ವಿಯಲ್ಲಿ ಆಲಮಟ್ಟೆ ಆಣೆಕಟ್ಟಿನ ಹಿನ್ನೀರಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಸಂತ್ರಸ್ತರ ಬದುಕು ಸುಧಾರಿಸಿಲ್ಲ. ದಿನದಿಂದ ದಿನಕ್ಕೆ ಕುಸಿಯುತ್ತಲೆ ಇದೆ ಹೊರತು ಹೊಸ ರೂಪು ಪಡೆದುಕೊಳ್ಳುತ್ತಿಲ್ಲ. ಮೂಲಕ ಸೌಕರ್ಯಗಳ ಕೊರತೆ ಜೊತೆಗೆ ಜೀವನಕ್ಕೆ ಆಧಾರವಾಗಿರಬೇಕಿರುವ ಕಸಬು ಪರಿಪೂರ್ಣವಾಗಿ ಇಲ್ಲದೆ ಒದ್ದಾಡುತ್ತಿದ್ದಾರೆ. ನೂರಾರು ಭರವಸೆ ನೀಡಿ ಅಧಿಕಾರಕ್ಕೆ ಬಂದ ಐದು ಸರ್ಕಾರಗಳು ಸಂತ್ರಸ್ತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲಿ ವಿಫಲವಾಗಿವೆ ಎನ್ನುವುದೇ ದುರಂತ ಸಂಗತಿ.
ಸಮಸ್ಯೆಗಳ ಸರಮಾಲೆ..!
ಮುಳಗಡೆಯಾದ ಬಾಗಲಕೋಟೆ ನಗರಕ್ಕೆ ಹೊಸ ನಗರ ಸೃಷ್ಟಿ ಮಾಡಿ ಸಮರ್ಪಕ ಮೂಲ ಸೌಕರ್ಯ ಒದಗಿಸಲಾಯಿತು. ಆದರೇ ಕೈಗಾರಿಕೆ, ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡದ ಪರಿಣಾಮ ಉದ್ಯೋಗ ಸೃಷ್ಟಿಯಾಗದೆ ನಗರ ಸಂತ್ರಸ್ತರು ಇಂದಿಗೂ ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶದ ಪುನರ್ ವಸತಿ ಕೇಂದ್ರಗಳ ಪರಿಸ್ಥಿತಿ ತೀರಾ ಅದ್ವಾನ್ ಪರಿಸ್ಥಿತಿ ಎದುರಿಸುತ್ತಿವೆ. ಈ ಕೇಂದ್ರಗಳಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಹೊರ ಚರಂಡಿಗಳ ವ್ಯವಸ್ಥೆ ಇದ್ದರು ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿವೆ. ಆಟದ ಮೈದಾನ, ಉದ್ಯಾನವನಗಳಿಲ್ಲ. ಕಂಬಾರಿಕೆ, ಕುಂಬಾರಿಯಂತಹ ಗುಡಿ ಕೈಗಾರಿಕೆಗಳಿಗೆ ಪ್ರತ್ಯೇಕ ಭೂಮಿ ನೀಡಿಲ್ಲ. ಅವುಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಿಲ್ಲ. ಸ್ಮಶಾನಗಳು ಇಲ್ಲ.
ಅಲ್ಲದೆ ನದಿ ಪಕ್ಕದಲ್ಲಿಯೇ ಇದ್ದರು ಬೋರವೆಲ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅನೇಕ ಗ್ರಾಮಗಳು ಪುನರ್ ವಸತಿ ಕೇಂದ್ರಗಳಿಗೆ ಶಿಫ್ಟ ಆಗಿಲ್ಲ. ಉರಿ ಬಿಸಿನಲ್ಲಿಯೇ ಶೆಡ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಿಲ್ಲ. ಬಹು ವರ್ಷಗಳಿಂದ ಶಿಕ್ಷಣಕ್ಕೆ ಮೀಸಲಾತಿ ನೀಡುವ ಬೇಡಿಕೆ ಸ್ಪಂದಿಸಿಲ್ಲ. ಮುಖ್ಯವಾಗಿ ಸಂತ್ರಸ್ತ ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯ ಇಲ್ಲವೇ ಸದ್ಯಕ್ಕೆ ಸರ್ಕಾರದ ಅಡಿಯಲ್ಲಿರುವ ವಿವಿಧ ವಸತಿ ನಿಲಯಗಳಿಗೆ ಸಂತ್ರಸ್ತರ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕನಸು ಗಗನ ಕುಸುಮವಾಗಿವೆ. ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಆದರೇ ಯೋಜನಾ ಸಂತ್ರಸ್ತರು ಎನ್ನುವ ಪ್ರಮಾಣ ಪತ್ರ ಪಡೆಯಲು ಸಂತ್ರಸ್ತರು ತೀವ್ರ ಹೆಣಗಾಡುವ ಪರಿಸ್ಥಿತಿ ಇದೆ.
ಇಂತಹ ನೊರೆಂಟು ಬೇಡಿಕೆ, ಸಮಸ್ಯೆಗಳು ತೀವ್ರ ಸ್ವರೂಪವಾಗಿವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರು ಈ ಬಗ್ಗೆ ಗಮನ ಹರಿಸಿಲ್ಲ. ಇದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳು, ಅಽಕಾರಿಗಳೊಂದಿಗೆ ಸಭೆ ನಡೆಸಿದರೇ ಸಾಲದು ಸಂತ್ರಸ್ತರೊಂದಿಗೆ ಚರ್ಚೆ ನಡೆಸಬೇಕು. ಹೊಸ ಸವಾಲುಗಳು ಕೂಡಾ ಜಟಿಲವಾಗಿವೆ. ಎಲ್ಲವನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದೆ ಒಂದು ಪುನರ್ ವಸತಿ ಕೇಂದ್ರ ಹಾಗೂ ಸಂತ್ರಸ್ತರು ಶಾಪಗ್ರಸ್ತರಾಗುವ ಸಂಭವ ಇದೆ ಎನ್ನುತ್ತಾರೆ ಹೋರಾಟಗಾರರು. ಎರಡು ದಶಕಗಳೆದರು ಸಂತ್ರಸ್ತರ ಹಣೆ ಬರಹ ಬದಲಾಗಿಲ್ಲ. ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.