ಕುಂದಗೋಳ: ತಾಲೂಕಿನ ಚಾಕಲಬ್ಬಿ ಗ್ರಾಮದ ಶೇಖಪ್ಪ ಬೀಚಗತ್ತಿ ಅವರು 20 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಾನುವಾರ ಗ್ರಾಮಕ್ಕೆ ಬಂದ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಶೇಖಪ್ಪ ಬೀಚಗತ್ತಿ ಅವರು ಬಿಎಸ್ಎಫ್ನಲ್ಲಿ ಯೋಧರಾಗಿ ಜಮ್ಮು-ಕಾಶ್ಮೀರ, ಪಠಾಣಕೋಟ್, ಮೇಘಾಲಯ ಸೇರಿ ದೇಶದ ವಿವಿಧ ಸ್ಥಳಗಳಲ್ಲಿ 20 ವರ್ಷ ಮೂರು ತಿಂಗಳು ದೇಶಸೇವೆ ಮಾಡಿದ್ದಾರೆ. ಸೇವೆಯಿಂದ ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮದ ಯುವಕರು ಹಾಗೂ ನಾಗರಿಕರು ಅವರನ್ನು ಚಕ್ಕಡಿಯಲ್ಲಿ ಹರಿ ಮಂದಿರ ದೇವಸ್ಥಾನದಿಂದ ಯಲ್ಲಮ್ಮ ದೇವಿ ದೇವಸ್ಥಾನದವರೆಗೆ ಮೆರವಣಿಗೆ ಮಾಡಿದರು. ನಂತರ ಗ್ರಾಮದ ಯಲ್ಲಮ್ಮನ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಾತನಾಡಿದ ಅವರು, ನನ್ನ ಉಳಿದ ಜೀವನವನ್ನು ಭೂಮಿ ತಾಯಿಯ ಮಡಿಲಲ್ಲಿ ಕೃಷಿ ಮಾಡುತ್ತ ಭೂಮಿಯ ಋಣ ತೀರಿಸುತ್ತೇನೆ ಎಂದರು. ಮಂಜುನಾಥ ಬಾರಕೇರ, ರಮೇಶ ಅತ್ತಿಗೆರೆ, ಸಂಭಾಜಿ ಹಾನಗಲ್, ಮಂಜು ಕಂಬಳಿ, ರವಿ ದೊಡ್ಡಮನಿ, ಗ್ರಾಮಸ್ಥರು ಇದ್ದರು.</