ಹಾಸನ: ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕಗಳಿಸುವುದಷ್ಟೇ ಸಾಧನೆಯಲ್ಲ. ಜೀವನದ ಪ್ರತಿ ಅನುಭವವನ್ನು ಗ್ರಹಿಸಿ ತನ್ನ ಜೀವನವನ್ನು ದೇಶದ ಅಭಿವೃದ್ಧಿಗಾಗಿ ಹಾಗೂ ದೇಶ ಸೇವೆಗಾಗಿ ಸಮರ್ಪಿಸುವುದೇ ನಿಜವಾದ ಸಾಧನೆ ಎಂದು ಟೈಮ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಅಕ್ಷರ ಅಕಾಡೆಮಿಯ ಸಂಸ್ಥಾಪಕ ಟೈಮ್ಸ್ ಗಂಗಾಧರ್ ತಿಳಿಸಿದರು
ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ಭಾನುವಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ 200 ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ಎಂಬ ಹೆಸರಿನಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಪ್ರತಿ ವರ್ಷವೂ ನೋಡಿದಾಗ ಸಾವಿರಾರು ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಎಸ್ಎ ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಈಗಿನ ಮಕ್ಕಳಿಗೆ ನೀಟ್, ಜೆಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಡಾಕ್ಟರ್ ಅಥವಾ ಇಂಜಿನಿಯರ್ ಆಗುವುದೇ ಕನಸಾಗಿರುತ್ತದೆ. ಆದರೆ ಮಕ್ಕಳು ನಾಗರೀಕ ಸೇವೆಯಂತಹ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂದರು.
ಅಕ್ಷರ ಅಕಾಡೆಮಿ ಹಾಗೂ ಅಕ್ಷರ ಬುಕ್ ಹೌಸ್ ವತಿಯಿಂದ ಕಳೆದ ಆರು ವರ್ಷಗಳಿಂದಲೂ ಅಕ್ಷರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಈ ಪುರಸ್ಕಾರದಲ್ಲಿ ಪ್ರತಿ ಮಕ್ಕಳಿಗೂ ಪುಸ್ತಕಗಳನ್ನೇ ಪುರಸ್ಕಾರರೂಪದಲ್ಲಿ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದಲ್ಲದೆ, ಪ್ರತಿ ಮನೆಯಲ್ಲೂ ಸಣ್ಣ ಗ್ರಂಥಾಲಯವನ್ನು ಸ್ಥಾಪಿಸಿ ಪುಸ್ತಕ ಓದುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಂತರ ಮಾತನಾಡಿದ ಟೈಮ್ಸ್ ಸಂಸ್ಥೆಯ ಅಧ್ಯಕ್ಷ ಸುರೇಂದ್ರ, ಇಂದಿನ ಯುವಕರು ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ಬದಲು ತಾವೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗವನ್ನು ನೀಡುವಂತಹ ಕನಸನ್ನು ಕಾಣಬೇಕು ಹಾಗೂ ಆ ಕನಸು ನನಸು ಮಾಡುತ್ತಾ ಸಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ್ದ ಹಾಸನ ತಾಲೂಕಿನ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ರಕ್ತ ನಿಧಿ ಘಟಕದ ಮೋಹನ್, ಮಕ್ಕಳ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರಘುನಂದನ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ನ ಅಧ್ಯಕ್ಷ ಸಚಿನ್ ಹಾಗೂ ಮಾಜಿ ಅಧ್ಯಕ್ಷ ಡಾ. ವಿಕ್ರಂ, ಉದ್ಯಮಿ ರೂಪೇಶ್ ಹಾಗೂ ಇತರರು ಹಾಜರಿದ್ದರು.