More

    ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಲಿ

    ಬಾಗಲಕೋಟೆ: ಬಸವಣ್ಣನವರು ಜನಿಸಿದ ವಿಜಯಪುರ ಮತ್ತು ಐಕ್ಯ ಸ್ಥಳವಾದ ಬಾಗಲಕೋಟೆ ಈ ಎರಡು ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕೆಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

    ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ಹಿರಿಯ ಪತ್ರಕರ್ತ ರಾಮ ಮನಗೂಳಿ ಪ್ರಧಾನ ವೇದಿಕೆಯಲ್ಲಿ ನಡೆದ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ 1272 ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರಿಗೂ ವಚನ ರಚಿಸುವ ಅವಕಾಶ ನೀಡಿ, ಅಚ್ಚ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಬಸಣ್ಣನವರಿಗೆ ಸಲ್ಲುತ್ತದೆ ಎಂದರು.

    ಇಂತಹ ಅಬ್ದುತವಾದ ವಚನಗಳನ್ನು ನಾವು ಇಂದು ಹೇಳಬೇಕಾದಲ್ಲಿ ಪ.ಘು.ಹಳಕಟ್ಟಿ ಅವರ ಸ್ಮರಣೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಕನ್ನಡಿಗರ ಕರ್ತವ್ಯವಾಗಿದೆ. ಅಳಿದು ಹೋದ ವಚನಗಳನ್ನು ಹುಡುಕಿ ಪರಿಶೀಲಿಸಿ ಮರು ಮುದ್ರಣ ಮಾಡಿ ನಮಗೆ ದೊರಕುವಂತೆ ಮಾಡಿದ್ದಾರೆ. ಇಂತಹ ಕನ್ನಡ ನಾಡು ಶಾಂತಿಯ ಬೀಡಾಗಿದ್ದು, ಇಂತಹ ನಾಡು ಭೂಪ್ರದೇಶದಲ್ಲಿ ಯಾವುದಾದರೂ ಇದ್ದರೆ ಅದು ಕರ್ನಾಟಕ ರಾಜ್ಯ ಮಾತ್ರವೆಂದರು. ಯುವ ಸಮೂಹದಲ್ಲಿ ಇಂಗ್ಲೀಷ ವ್ಯಾಮೋಹ ಕಡಿಮೆ ಆಗಬೇಕು. ಯುರೋಪ ದೇಶದ 32 ರಾಷ್ಟ್ರಗಳಲ್ಲಿ ಇಂಗ್ಲೀಷ ಬಳಕೆಯಲ್ಲಿ ಇಲ್ಲ. ಅದು ಇರೋದು ಲಂಡನ್‍ನಲ್ಲಿ ಮಾತ್ರ ಎಂದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮಾತನಾಡಿ ಕನ್ನಡ ಎಲ್ಲರ ಪರಿಷತ್ ಆಗಿದ್ದು, ಕನ್ನಡದ ಸ್ಥಿತಿಗತಿಯ ಪರಿಶೀಲನೆ ಜೊತೆಗೆ ಪರಿಹಾರ ಹುಡುಕುವ ಕೆಲಸವಾಗಬೇಕಿದೆ. ಇಂಗ್ಲೀಷ ವ್ಯಾಮೋಹ ಹೆಚ್ಚಾಗಿದೆ. ಸೆಕ್ಯೂರಿಟಿ ಗಾರ್ಡ ಕೆಲಸಕ್ಕೂ ಇಂಗ್ಲೀಷ ಬರೋಲ್ಲ ಅಂದರೆ ಕೆಲಸ ದೊರೆಯುತ್ತಿಲ್ಲ. ಕನ್ನಡ ಶಾಲೆಗಳು ಸ್ವಿಡಲ್‍ನಲ್ಲಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ನಾವು ಕನ್ನಡದ ನೆಲದಲ್ಲಿದ್ದರೂ ಕೂಗುವ ಕೆಲಸವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮತ್ತು ಶಾಸಕ ಎಚ್.ವಾಯ್.ಮೇಟಿ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆ ಇದೆ. ಹೋಬಳಿ, ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕನ್ನಡ ಪರಿಷತ್ ವಿಶೇಷವಾಗಿವೆ. ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ರಜತಕೋಟೆ ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಬಿಡುಗಡೆ ಗೊಳಿಸಿದರೆ, ವಿವಿಧ ಲೇಖಕರ ಕೃತಿ ಹಾಗೂ ಪರಿಷತ್ತಿನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ತಾತಾಸಾಹೇಬ ಬಾಂಗಿ, ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಆಯಾ ತಾಲೂಕಾ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts