ಇಂದು ಅಪ್ಪಂದಿರ ದಿನದ ವಿಶೇಷ. ಈ ಹಿನ್ನೆಲೆಯಲ್ಲಿ ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ಅಪ್ಪನೆಂದರೆ ಅಪ್ಪ. ಅದಕ್ಕೆ ಬೇರೆ ಪದವಿಲ್ಲ. ನನ್ನಪ್ಪ ಕಷ್ಟಜೀವಿ. ಬಡತನವಿದ್ದರೂ ಪ್ರೀತಿ ತೋರುವುದರಲ್ಲಿ ಸಿರಿವಂತ. ಕೊನೆಯ ಹಾಗೂ ಹೇಳಿದ್ದು ಕೇಳಿಕೊಂಡಿರುವ ಮಗಳಾದ್ದರಿಂದ, ಒಮ್ಮೆಯೂ ಪೆಟ್ಟು ತಿಂದದ್ದಾಗಲಿ, ಬೈಸಿಕೊಂಡದ್ದಾಗಲಿ ನೆನಪಿಲ್ಲ. ಹುಷಾರಿಲ್ಲದಾಗ ಹೆಗಲ ಮೇಲೆ ಹೊತ್ತುಕೊಂಡು ಪೇಟೆಯ ಆಸ್ಪತ್ರೆಗೆ ಕರೆದೊಯ್ದಿದ್ದು, ಹಾಲಿನಲ್ಲಿ ಬ್ರೆಡ್ಡು ಚೂರು ಮಾಡಿ ಹಾಕಿ ತಿನ್ನಿಸಿದ್ದು, ಭತ್ತದ ಗದ್ದೆಗೆ ಹಂದಿ ಬರುತ್ತವೆಂದು ರಾತ್ರಿ ಗದ್ದೆ ಕಾಯಲು ಅಪ್ಪನ ಜತೆ ಹೋಗಿ ಮಂಚಿಗೆಯಲ್ಲಿ ಮಲಗುತ್ತಿದ್ದುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮಾನ ಪಡೆದಾಗ ಬೇರೆಯವರ ಮುಂದೆ ಅಪ್ಪ ಹೆಮ್ಮೆಯಿಂದ ಹೇಳಿಕೊಂಡಿದ್ದು ತಿಳಿದ ಕ್ಷಣ, ಎಲ್ಲವೂ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಇಂದಿಗೂ ಯಾವುದಕ್ಕಾದರೂ ಅಪ್ಪ ಇದ್ದಾರೆಂಬ ಭರವಸೆಯೇ ನನಗೆ ಶಕ್ತಿ, ಸ್ಫೂರ್ತಿ.
| ಮಂಗಳ ಎಂ. ನಾಡಿಗ್ ಜಯನಗರ, ಬೆಂಗಳೂರು