ನವದೆಹಲಿ: ನ್ಯಾಯ ಎತ್ತಿ ಹಿಡಿಯಬೇಕಾಗಿದ್ದ ನ್ಯಾಯಾಧೀಶರೇ ಸ್ವತ ನ್ಯಾಯ ದೇವತೆಯ ಕಣ್ಣಿಗೆ ಕಪ್ಪುಪಟ್ಟಿ ಸುತ್ತಿ ಅನ್ಯಾಯವನ್ನು ಪೋಷಿಸಿದ ನ್ಯಾಯಮೂರ್ತಿ ಮತ್ತು ತಂಡ ಅಲಾಹಾಬಾದ್ ಹೈಕೋರ್ಟ್ನಲ್ಲಿ ನಗ್ನರಾಗಿದ್ದಾರೆ. 10 ಕೋಟಿ ರೂ ಲಂಚ ತಿಂದು ಅತ್ಯಾಚಾರಿ ಮಹಾಶಯನೊಬ್ಬನಿಗೆ ಜಾಮೂನು ತಿನಿಸಿರುವ ಪ್ರಸಂಗವಿದು.
ಅತ್ಯಾಚಾರ ಆರೋಪದಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರು ಜಾಮೀನಿಗಾಗಿ 10 ಕೋಟಿ ಮೊತ್ತದ ಡೀಲ್ ನಡೆಸಿದ್ದಾರೆ ಎಂದು ಅಲಾಹಾಬಾದ್ ಹೈಕೋರ್ಟ್ ತನಿಖೆ ವೇಳೆ ಬಯಲಾಗಿದೆ.
ಅಲ್ಲದೆ, ಈ ಡೀಲ್ನಲ್ಲಿ ಹಲವು ಪ್ರಮುಖರು ಭಾಗಿಯಾಗಿದ್ದಾರೆ. ಹಿರಿಯ ನ್ಯಾಯಮೂರ್ತಿಗಳು ಡೀಲ್ನಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ವರದಿಯಲ್ಲಿ ಉಲ್ಲೇಖವಾಗಿದೆ.
ಬೇಲ್ ಡೀಲ್ಗಾಗಿ 10 ಕೋಟಿಯಲ್ಲಿ ಮೂವರು ವಕೀಲರಿಗೆ 5 ಕೋಟಿ ಹಣ ಸಂದಾಯ ಹಾಗೂ ಪ್ರಜಾಪತಿಗೆ ಜಾಮೀನು ನೀಡಿದ್ದ ಜಡ್ಜ್ ಮಿಶ್ರಾ ಹಾಗೂ ಜಿಲ್ಲಾ ನ್ಯಾಯಮೂರ್ತಿ ರಾಜೇಂದ್ರ ಸಿಂಗ್ಗೆ ಉಳಿದ 5 ಕೋಟಿ ಸಂದಾಯವಾಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳ ಆಯ್ಕೆ ವೇಳೆಯೂ ಭ್ರಷ್ಟಾಚಾರ ನಡೆದಿದೆ. ಏಪ್ರಿಲ್ ಅಂತ್ಯದ ವೇಳೆಗೆ ನಿವೃತ್ತಿಯಾಗಬೇಕಾಗಿದ್ದ ಜಡ್ಜ್ ಓ.ಪಿ. ಮಿಶ್ರಾ, ಏಪ್ರಿಲ್ 7 ರಂದು ಪೋಕ್ಸೋ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡಿದ್ದು, ಕಾನೂನು ಬಾಹಿರ ಅಂತ ಭೋಸಲೆ ವರದಿ ನೀಡಿದ್ದಾರೆ. ನ್ಯಾಯಮೂರ್ತಿ ಓ.ಪಿ.ಮಿಶ್ರಾರೇ ಏಪ್ರಿಲ್ 25 ರಂದು ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ್ದರು.
ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ದಿಲೀಪ್. ಬಿ. ಭೋಸಲೆ ಆದೇಶದ ಮೇರೆಗೆ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು.
ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಪ್ರಜಾಪ್ರತಿಯನ್ನ ಬಂಧಿಸುವಂತೆ ಸುಪ್ರೀಂಕೋರ್ಟ್, ಯುಪಿ ಸರ್ಕಾರಕ್ಕೆ ಚಾಟಿ ಬೀಸಿತ್ತು. ಮಾರ್ಚ್ನಲ್ಲಿ ಪೊಲೀಸರು ಅವರನ್ನ ಬಂಧಿಸಿದ್ದರು. ಬಳಿಕ ಒಂದು ತಿಂಗಳಲ್ಲಿ ಜಾಮೀನು ಸಿಕ್ಕಿತ್ತು.