ಎಚ್.ಡಿ. ಕೋಟೆ : ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ಬಾಳೆ ಗಿಡಗಳು ನೆಲ ಕಚ್ಚಿವೆ. ಹುನಗಳ್ಳಿ ಗ್ರಾಮದ ರೈತ ತಿಮ್ಮೇಗೌಡರ 12 ಎಕರೆ ಬಾಳೆ ಫಸಲು ಮಣ್ಣುಪಾಲಾಗಿದೆ. ಬೆಳಗನಹಳ್ಳಿ ಗ್ರಾಮದ ರೈತ ಹರೀಶ್ ಅವರ 100ಕ್ಕೂ ಹೆಚ್ಚು ಬಾಳೆ ಗಿಡಗಳು ಮಳೆ, ಗಾಳಿ ಹೊಡೆತಕ್ಕೆ ಬಿದ್ದಿವೆ. ಇನ್ನೇನು ಕಟಾವಿನ ಹಂತದಲ್ಲಿದ್ದ ಬಾಳೆಗಿಡಗಳು ವರ್ಷಧಾರೆಯಿಂದ ನಾಶವಾದ ಬಗ್ಗೆ ರೈತ ಹರೀಶ್ ಬೇಸರ ವ್ಯಕ್ತ ಪಡಿಸಿದ್ದಾರೆ.
ವರ್ಷಧಾರೆ: ಎಚ್.ಡಿ. ಕೋಟೆ ಪಟ್ಟಣ ಸೇರಿದಂತೆ ಅಂತರಸಂತೆ ಹಾಗೂ ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮೂರು ಗಂಟೆಗಳ ಕಾಲ ಸುರಿದ ಗುಡುಗು ಸಹಿತ ಜೋರು ಮಳೆ ಹಿಂಗಾರು ಬೆಳೆಗಳಿಗೆ ತಂಪೆರೆದಿದೆ. ಹಿಂಗಾರು ಬೆಳೆಗಳಾದರೂ ಬರಲಿ ಎಂದು ರೈತರು ರಾಗಿ, ಜೋಳ, ಹುರಳಿ, ಹೆಸರು, ಅವರೆ ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಿದ್ದರು. ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.