ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಡಿ.10ರಿಂದ 14ರವರೆಗೆ ಲಕ್ಷದಿಪೋತ್ಸವ, ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ, 88ನೇ ಅಧಿವೇಶನ ಜರುಗಲಿದೆ.
ಡಿ.10ರಂದು ರಾತ್ರಿ 9ಕ್ಕೆ ಹೊಸಕಟ್ಟೆ ಉತ್ಸವ, 11ರಂದು ಕೆರೆಕಟ್ಟೆ ಉತ್ಸವ, 12ರಂದು ಲಲಿತೋದ್ಯಾನ ಉತ್ಸವ, 13ರಂದು ಕಂಚಿಮಾರುಕಟ್ಟೆ ಉತ್ಸವ, 14ರಂದು ಗೌರಿಮಾರುಕಟ್ಟೆ ಉತ್ಸವಗಳು ನೆರವೇರಲಿವೆ.
15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ ಕುಡ್ಲ, ಶ್ರೀಶಂಕರ ಟಿವಿ, ಯೂಟ್ಯೂಬ್ ಮತ್ತು ಫೇಸ್ಬುಕ್ಗಳಲ್ಲಿ ನೇರ ವೀಕ್ಷಣೆ ಮಾಡಬಹುದು.
ಸಾಹಿತ್ಯ ಸಮ್ಮೇಳನ: 14ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ, ವಿದ್ವಾಂಸ ಡಾ.ಎಸ್.ರಂಗನಾಥ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಪ್ರಾಧ್ಯಾಪಕ, ಸಂಸ್ಕೃತಿ ಚಿಂತಕ ಡಾ.ಜ್ಯೋತಿ ಶಂಕರ್, ಮೂಡುಬಿದಿರೆ ವಿಶ್ರಾಂತ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ಉಪನ್ಯಾಸ ನೀಡುವರು.
ಸರ್ವಧರ್ಮ ಸಮ್ಮೇಳನ: 13ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸೃಷ್ಟಿ ಮಣಿಪಾಲ್ ಇನ್ಸ್ಟಿಟ್ಯೂಟ್ ಬೋಧಕ ಮತ್ತು ಕಥೆಗಾರ ಕೇಶವ ಮುಳಗಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಹೌಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಚೇತನ್ ಲೊಬೊ ಉಪನ್ಯಾಸ ನೀಡುವರು.