More

    ಕರೊನಾಕ್ಕೆ ಆಯುರ್ವೇದ ಚಿಕಿತ್ಸೆ ಸಕ್ಸಸ್: ಬೆಂಗಳೂರಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿ 

    | ರಮೇಶ ದೊಡ್ಡಪುರ 

    ಬೆಂಗಳೂರು: ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ಮಹಾಮಾರಿಗೆ ಭಾರತೀಯ ಪುರಾತನ ವೈದ್ಯ ಪದ್ಧತಿಯಾದ ಆಯುರ್ವೇದದಿಂದ ಪರಿಹಾರ ಸಾಧ್ಯ ಎಂಬುದು ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್​ನಿಂದ ದೃಢಪಟ್ಟಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದ್ದು, ಕೇವಲ 9 ದಿನದಲ್ಲಿ ಎಲ್ಲರೂ ಗುಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.

    ಕರೊನಾಕ್ಕೆ ಆಯುರ್ವೇದ ಚಿಕಿತ್ಸೆ ಸಕ್ಸಸ್: ಬೆಂಗಳೂರಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿ ಎರಡೇ ಮಾತ್ರೆ ಬಳಕೆ: ಕ್ಲಿನಿಕಲ್ ಟ್ರಯಲ್​ಗೆ ಸಿಟಿಆರ್​ಐನಲ್ಲಿ ನೋಂದಣಿ ಮಾಡಿಕೊಂಡಿರುವ ದಾಖಲೆ ವಿಜಯವಾಣಿಗೆ ಲಭ್ಯವಾಗಿದೆ. ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಸೋಂಕಿತರಿಗೆ ನೀಡಲಾಗಿತ್ತು. ಜೂ.7ರಿಂದ ಜೂ.25ರವರೆಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. 23 ವರ್ಷದಿಂದ 65 ವರ್ಷದವರೆಗಿನ ಸೋಂಕಿತರು ಟ್ರಯಲ್​ಗೆ ಒಳಪಟ್ಟಿದ್ದು, ಎಲ್ಲರೂ ಸೋಂಕಿನ ಗುಣಲಕ್ಷಣ ಹೊಂದಿದ್ದರು. ಅದಾಗಲೇ ನೀಡುತ್ತಿದ್ದ ಅಲೋಪತಿ ಚಿಕಿತ್ಸೆ ಜತೆಗೆ ಆಯುರ್ವೇದ ಟ್ರಯಲ್ ನಡೆಸಲಾಗಿದ್ದು, ಕೇವಲ 2ರಿಂದ 4 ದಿನದಲ್ಲಿ ಸೋಂಕಿನ ಗುಣಲಕ್ಷಣಗಳು ಸಂಪೂರ್ಣ ಮಾಯವಾಗಿವೆ. 3 ರಿಂದ 9 ದಿನದ ಅವಧಿಯಲ್ಲಿ ಎಲ್ಲ ಸೋಂಕಿತರ ಕರೊನಾ ಪರೀಕ್ಷೆ ನೆಗೆಟಿವ್ ಬಂದಿದೆ. ಯಾವ ಸೋಂಕಿತರೂ ಮುಂದಿನ ಹಂತಕ್ಕೆ (ಸಾಮಾನ್ಯದಿಂದ ಗಂಭೀರ ಹಂತಕ್ಕೆ) ಹೋಗದೆ ಗುಣಮುಖರಾಗಿದ್ದು, ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ ಎಂಬುದು ತಿಳಿದು ಬಂದಿದೆ. ಈ ವಿಚಾರ ಸೋಮವಾರ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆಯಾಗಿರುವುದಾಗಿ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

    ಅತಿ ಕಡಿಮೆ ದರ

    ಕರೊನಾ ಗುಣಪಡಿಸಲು ಲಕ್ಷಾಂತರ ರೂ. ವೆಚ್ಚವಾಗುತ್ತಿರುವುದರ ನಡುವೆಯೇ ಆಯುರ್ವೇದ ಕ್ಲಿನಿಕಲ್ ಟ್ರಯಲ್​ನಲ್ಲಿ ಪುಡಿಗಾಸಲ್ಲೇ ಸೋಂಕಿತರು ಗುಣಮುಖರಾಗಿದ್ದಾರೆ. ಒಬ್ಬ ರೋಗಿಗೆ ಕನಿಷ್ಠ 60 ರೂ. ನಿಂದ 180 ರೂ.ನಲ್ಲಿ ಚಿಕಿತ್ಸೆ ನೀಡಲಾಗಿದೆ. ಟ್ರಯಲ್​ನಲ್ಲಿ ಭಾಗವಹಿಸಿದವರ ಪೈಕಿ ಒಬ್ಬರು ಕ್ಷಯರೋಗದಿಂದ(ಟಿಬಿ) ಬಳಲುತ್ತಿದ್ದರು. ಹೃದ್ರೋಗ ಸಮಸ್ಯೆ, ಮಧುಮೇಹ ಹೊಂದಿದವರೆಲ್ಲರೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕ್ಲಿನಿಕಲ್ ಟ್ರಯಲ್ ಕುರಿತು ಪ್ರತಿಕ್ರಿಯೆಗೆ ಡಾ. ಗಿರಿಧರ ಕಜೆ ಲಭ್ಯವಾಗಿಲ್ಲ. ಇದೀಗ ನಡೆದಿರುವ ಯಶಸ್ವಿ ಪ್ರಯೋಗದ ಆಧಾರದಲ್ಲಿ ಆಯುರ್ವೇದ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ (ಆರ್​ಜಿಯುಎಚ್​ಎಸ್) ಕುಲಪತಿ ಡಾ. ಎಸ್. ಸಚ್ಚಿದಾನಂದ ಅವರಿಗೆ ಸರ್ಕಾರ ತಿಳಿಸಿದೆ.

    ಗುಣಲಕ್ಷಣಗಳುಳ್ಳ ಸೋಂಕಿತರು

    ಕರೊನಾ ಸೋಂಕು ತಗುಲಿದ್ದರೂ ಶೇ.90 ಜನರಲ್ಲಿ ಯಾವುದೇ ಗುಣಲಕ್ಷಣಗಳು ಇರುವುದಿಲ್ಲ. ಈ ಪೈಕಿ ಅನೇಕರಲ್ಲಿ ಯಾವುದೇ ಔಷಧದ ಅವಶ್ಯಕತೆಯೂ ಇಲ್ಲದಂತೆ ಅಥವಾ ಸಾಮಾನ್ಯ ಔಷಧದಿಂದಲೇ ಗುಣಮುಖರಾಗುತ್ತಾರೆ. ಆದರೆ ಇನ್ನುಳಿದ ಶೇ.10 ಜನರಲ್ಲಿ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆಯಂತಹ ಗುಣಲಕ್ಷಣಗಳಿರುತ್ತವೆ. ಇವರಲ್ಲಿ ಕಿಡ್ನಿ, ಹೃದಯ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು, ಮಧುಮೇಹದಂತಹ ಸಮಸ್ಯೆಗಳುಳ್ಳವರಾದರೆ (ಕೋ ಮಾರ್ಬಿಡ್) ಕರೊನಾದಿಂದ ಗುಣಮುಖವಾಗುವ ಸಾಧ್ಯತೆ ಕಡಿಮೆಯಾಗುತ್ತ ಸಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಕ್ಲಿನಿಕಲ್ ಟ್ರಯಲ್​ನಲ್ಲಿ ಭಾಗಿಯಾಗಿದ್ದ ಎಲ್ಲ 10 ಸೋಂಕಿತರೂ ಗುಣಲಕ್ಷಣಗಳುಳ್ಳ ಹಾಗೂ ಕೋಮಾರ್ಬಿಡ್ ಸ್ಥಿತಿಯಲ್ಲಿದ್ದವರಾದ್ದರಿಂದ ಔಷಧ ಎಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

    ಆಯುರ್ವೇದಕ್ಕೆ ಹಳೆಯದು

    ಸಾಂಕ್ರಾಮಿಕ ರೋಗಗಳ ನಿರ್ವಹಣೆ ಆಯುರ್ವೇದಕ್ಕೆ ಹೊಸತಲ್ಲ ಎಂದು ಸಿಟಿಆರ್​ಐಗೆ ನೀಡಿರುವ ವಿವರಣೆಯಲ್ಲಿ ಸಂಶೋಧಕರು ತಿಳಿಸಿದ್ದಾರೆ. ಪ್ರಾಚೀನ ವಿಜ್ಞಾನಿ, ಋಷಿಗಳು ಸಾಂಕ್ರಾಮಿಕ ರೋಗಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಚರಕ, ಸಾಂಕ್ರಾಮಿಕ ರೋಗಗಳನ್ನು ಜನಪದೋಧ್ವಂಸ ಎಂಬ ಶೀರ್ಷಿಕೆಯಡಿ ಹಾಗೂ ಶುಶ್ರುತ, ಔಪಸರ್ಗಿಕ ರೋಗ ಎಂಬ ಶೀರ್ಷಿಕೆಯಡಿ ವಿವರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ವಿಕ್ಟೋರಿಯಾದಲ್ಲಿ ಸಂಶೋಧನೆ

    ಭಾರತದ ಅನೇಕ ಆಯುರ್ವೇದ ವೈದ್ಯರು ಕರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಯಂತೆ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. ಬೆಂಗಳೂರಿನ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತರಿಗೆ ಪ್ರಯೋಗಾತ್ಮಕ ಚಿಕಿತ್ಸೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಐಸಿಎಂಆರ್ ಅಧೀನದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಆಫ್ ಇಂಡಿಯಾದಲ್ಲಿ ನೋಂದಣಿಯಾದ ಸಂಶೋಧನೆಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಡಾ. ಗಿರಿಧರ ಕಜೆ ಮುಖ್ಯ ಸಂಶೋಧಕರಾದರೆ, ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ.ಆರ್. ಜಯಂತಿ ಸಹ-ಸಂಶೋಧಕಿಯಾಗಿದ್ದರು.

    ಕರೊನಾಕ್ಕೆ ಆಯುರ್ವೇದ ಚಿಕಿತ್ಸೆ ಸಕ್ಸಸ್: ಬೆಂಗಳೂರಲ್ಲಿ ಕ್ಲಿನಿಕಲ್ ಟ್ರಯಲ್ ಯಶಸ್ವಿ ಆಯುರ್ವೇದ ಸಂಶೋಧನೆಗೊಳಪಟ್ಟ 10 ಸೋಂಕಿತರೂ ಗುಣಮುಖರಾಗಿದ್ದಾರೆ. ಈ ಕುರಿತು ಟಾಸ್ಕ್ ಫೋರ್ಸ್ ಸಭೆಯಲ್ಲಿ ರ್ಚಚಿಸಲಾಗಿದೆ. ಈ ಸಂಶೋಧನೆಯನ್ನು ಚಿಕಿತ್ಸೆಯಲ್ಲಿ ಬಳಕೆ ಮಾಡುವ ಕುರಿತು ವರದಿ ನೀಡುವಂತೆ ಆರ್​ಜಿಯುಎಚ್​ಎಸ್ ಕುಲಪತಿಯವರಿಗೆ ತಿಳಿಸಲಾಗಿದೆ. ಅದರ ಆಧಾರದಲ್ಲಿ ಮುಂದುವರಿಯುತ್ತೇವೆ.
    | ಬಿ. ಶ್ರೀರಾಮುಲು ಆರೋಗ್ಯ ಸಚಿವ

    ಕರೊನಾಗೆ ಬಲಿಯಾದವರ ಅಂತ್ಯಕ್ರಿಯೆ ಹೇಗಿರಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts