ದಾಬಸ್ಪೇಟೆ: ಕೊಲೆಯಾಗಿರುವ ಶಂಕೆ ಹಿನ್ನೆಲೆಯಲ್ಲಿ ವಾರದ ಹಿಂದೆ ಹೂತಿದ್ದ ಶವ ಹೊರತೆಗೆದು ಪರೀಕ್ಷೆ ನಡೆಸಿದ ಪ್ರಕರಣದ ನರಸೀಪುರ ಗ್ರಾಪಂ ವ್ಯಾಪ್ತಿಯ ಕೆ.ಜಿ. ಜಾಜೂರಿನಲ್ಲಿ ಶನಿವಾರ ನಡೆದಿದೆ.
ಜು.25ರಂದು ಸದಾನಂದ (41) ಮೃತರಾಗಿದ್ದು, ವಾಟರ್ ಮ್ಯಾನ್ ಆಗಿದ್ದರು. ಇವರಿಗೆ ಪತ್ನಿ ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಮೃತಪಟ್ಟ ಹಿಂದಿನ ದಿನ ದೊಡ್ಡ ಮಗಳ ಸೀಮಂತಕ್ಕೆಂದು ಎಲ್ಲ ಸಾಮಗ್ರಿಗಳನ್ನು ಮನೆಗೆ ತಂದು ಕೊಟ್ಟಿದ್ದಾರೆ. ನಂತರ ಪತ್ನಿ ಜತೆ ಜಗಳ ನಡೆದಿದ್ದು, ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೊಲೆ ಶಂಕೆ: ಕೌಟುಂಬಿಕ ಕಲಹದಲ್ಲಿ ಸದಾನಂದನನ್ನು ಹತ್ಯೆ ಮಾಡಿ ನೇಣಿಗೇರಿಸಿದ್ದಾರೆ. ಅಲ್ಲದೇ ಮೃತನ ಮನೆಯವರು ಪೊಲೀಸ್ ಠಾಣೆಗೂ ದೂರು ನೀಡದೆ ಮೃತದೇಹವನ್ನು ಅಂದು ಸಂಜೆ 7 ಗಂಟೆಗೆ ಅಂತ್ಯಸಂಸ್ಕಾರ ಮಾಡಿರುವುದು ಗ್ರಾಮಸ್ಥರ ಸಂಶಯಕ್ಕೆ ಕಾರಣವಾಗಿತ್ತು.
ಘಟನೆಯ ಮರುದಿನ ಗ್ರಾಮಸ್ಥರು ಈ ವಿಷಯವನ್ನು ದಾಬಸ್ಪೇಟೆ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಮನೆಯವರನ್ನು ವಿಚಾರಿಸಿದಾಗ ಕರೊನಾ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರೆ ದೇಹ ನೀಡುವುದು ತಡವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದಿದ್ದಾರೆ.
ಅನುಮಾನಗೊಂಡ ಪೊಲೀಸರು ಆ.1ರಂದು ತಹಸೀಲ್ದಾರ್ ಸಮ್ಮುಖದಲ್ಲಿ ಶವ ಹೊರತೆಗೆದು ವೈದ್ಯರು ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮತ್ತೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕೈ ಇಲ್ಲದವನಿಂದ ಆತ್ಮಹತ್ಯೆ ಸಾಧ್ಯವೇ?: ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾದ ಸದಾನಂದನಿಗೆ ಐದು ವರ್ಷದವನಿದ್ದಾಗಲೇ ಎಡ ಕೈ ನಿಷ್ಕ್ರಿಯಗೊಂಡಿದ್ದು, ಒಂದೇ ಕಯಿಂದ ಹೇಗೆ ನೇಣು ಹಾಕಿಕೊಂಡರು ಎಂಬ ಅನುಮಾನ ವ್ಯಕ್ತವಾಗಿದೆ.
ಶವದಲ್ಲಿ ಸಂಗ್ರಹಿಸಿದ ಮಾದರಿಯನ್ನು ಬೆಂಗಳೂರಿನ ಮಡಿವಾಳದ ವಿಧಿ ವಿಜ್ಞಾನ ಸಂಸ್ಥೆಗೆ ರವಾನಿಸಿದ್ದು, ಲಿತಾಂಶ ಬಂದ ಬಳಿಕವಷ್ಟೇ ನಿಜಾಂಶ ತಿಳಿಯಲಿದೆ.
ವಸಂತ್, ಸಬ್ಇನ್ಸ್ಪೆಕ್ಟರ್, ದಾಬಸ್ಪೇಟೆ