ಆನೇಕಲ್: ವಿಶ್ವ ಹುಲಿ ದಿನದ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಗುರುವಾರ ಹುಲಿಗಳ ಬಗ್ಗೆ ಜಾಗೃತಿ ಹಾಗೂ ಮಕ್ಕಳಿಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೆಂಗಳೂರಿನಿಂದ ಆಗಮಿಸಿದ್ದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹುಲಿ ಕಾಡಿನಲ್ಲಿ ಹೇಗೆ ವಾಸ ಮಾಡುತ್ತದೆ, ಪಾರ್ಕಿನಲ್ಲಿರುವ ಹುಲಿಯು ಯಾವ ರೀತಿ ಜೀವಿಸುತ್ತದೆ, ಹುಲಿ ಹೆಜ್ಜೆ ಗುರುತು ಹೇಗಿರುತ್ತದೆ, ಹುಲಿ ಆಹಾರ ಪದ್ಧತಿ, ಕಾಡು ಹುಲಿಗಳಿಂದ ರಕ್ಷಣೆ ಹೇಗೆ ಹಾಗೂ ಅವುಗಳ ಸಂತತಿ ಬೆಳವಣಿಗೆಗೆ ಮನುಷ್ಯನಿಂದ ಆಗುತ್ತಿರುವ ತೊಂದರೆ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
ಪಾರ್ಕ್ನಲ್ಲಿ ಹುಲಿ ಇರುವ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಹುಲಿ ಮುಖದ ಮಾದರಿ ಗವಸು ಧರಿಸಿ ಓಡಾಡಲು ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಪ್ರವಾಸಿಗರಿಗೂ ಹುಲಿಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹುಲಿಗಳ ಸಂತತಿ ಕಡಿಮೆ ಆಗುತ್ತಿದ್ದು, ಕಾಡು ಪ್ರಾಣಿಗಳ ರಕ್ಷಣೆ ಹಾಗೂ ಅವುಗಳ ಸುರಕ್ಷತೆ ಬಗ್ಗೆ ಜನರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಉದ್ಯಾನವನದ ಶೈಕ್ಷಣಿಕ ಅಧಿಕಾರಿ ಅಮಲಾ ತಿಳಿಸಿದರು.
ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಐಕ್ಯ ಅವರ ಸಹಯೋಗದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಎಸ್ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾದ 55 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಹುಲಿ ಸಂರಕ್ಷಣಾ ಸಂದೇಶ ಸಾರಲು ಮೃಗಾಲಯದ ಆವರಣದಲ್ಲಿ ಜಾಥಾ ನಡೆಸಿದರು.
ಹುಲಿಗಳ ಬಗ್ಗೆ ನಾವು ಸಾಕಷ್ಟು ತಿಳಿದುಕೊಳ್ಳುವುದಿದೆ. ಕಾಡುಗಳಲ್ಲಿ ಹುಲಿಗಳನ್ನು ಕಂಡಾಗ ನಾವು ಯಾವ ರೀತಿ ತಪ್ಪಿಸಿಕೊಳ್ಳಬೇಕು, ಹುಲಿಗಳ ಆಹಾರ ಪದ್ಧತಿ ಹೇಗಿರುತ್ತದೆ ಎನ್ನುವ ಬಗ್ಗೆ ವಿಶೇಷವಾಗಿ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವನಶ್ರೀ ವಿಪಿನ್ ಸಿಂಗ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ
ವರ್ಲ್ಡ್ ಟೈಗರ್ ಡೇ ಹಿನ್ನೆಲೆ ಹುಲಿ ದತ್ತು: ವಿಶ್ವ ಹುಲಿ ದಿನದ ಅಂಗವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹಿಮಾದಾಸ್ ಎನ್ನುವ ಹೆಣ್ಣು ಹುಲಿಯನ್ನು ಬೆಂಗಳೂರಿನ ಅರ್ಚನಾ ಎಂಬುವವರು ದತ್ತು ಪಡೆದರು.