ಮುಂಡರಗಿ: ಸುಜಲಾನ್ ಪವನ ವಿದ್ಯುತ್ ಘಟಕಗಳಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ವಿುಕರಿಗೆ ಹತ್ತು ತಿಂಗಳ ಬಾಕಿ ವೇತನ ನೀಡಬೇಕು ಮತ್ತು ಭದ್ರತಾ ಸಿಬ್ಬಂದಿಯನ್ನು ನಿರಂತರ ಮುಂದುವರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕೈಗೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ ಒಂಬತ್ತು ದಿನ ಪೂರೈಸಿ ಹತ್ತನೇ ದಿನಕ್ಕೆ ಕಾಲಿಟ್ಟಿತು.
ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಯ ಮುಂದೆ ಪೊರಕೆ ಹಿಡಿದು ಪ್ರತಿಭಟನೆ ನಡೆಸಿ ಸುಜಲಾನ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸತ್ಯಾಗ್ರಹ ನೇತೃತ್ವವಹಿಸಿದ್ದ ಉತ್ತರ ಕರ್ನಾಟಕ ಮಹಾ ಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಭದ್ರತಾ ಸಿಬ್ಬಂದಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಪವನ ವಿದ್ಯುತ್ ಕಂಪನಿಗಳು ಭದ್ರತಾ ಸಿಬ್ಬಂದಿಗಳ ಬೇಡಿಕೆ ಈಡೇರಿಸದೆ ಸತಾಯಿಸುತ್ತಿದ್ದಾರೆ. ಬೇಡಿಕೆಗಳು ಈಡೇರುವವರೆಗೂ ಧರಣಿ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂರಅಹ್ಮದ್ ಮಕಾಂದಾರ, ಈರಯ್ಯ ಲಕ್ಷ್ಮೇಶ್ವರಮಠ, ರಸೀದಸಾಬ್ ಮೋರಗೇರಿ, ಆರ್.ಡಿ. ಕಡ್ಡಿ, ಎಸ್.ಎಂ. ಮುದ್ಲಾಪೂರ, ಎಸ್.ಎಸ್. ಪೂಜಾರ, ಖಾಜಾಬಿ ಖತೀಬ್, ಲಕ್ಷ್ಮವ್ವ ಬಳಿಗೇರ, ಲಕ್ಷ್ಮಮ್ಮ ಬೇವಿನಕಟ್ಟಿ, ಅನ್ನವ್ವ ಸನದಿ, ಮಲ್ಲವ್ವ ಮುದ್ಲಾಪೂರ, ಸಾವಿತ್ರಮ್ಮ ಹಾರೋಗೇರಿ, ಇತರರಿದ್ದರು.